ಕೊಪ್ಪಳ: ನಗರ ಸ್ಥಳೀಯ ಸಂಸ್ಥೆಗಳ ಹಂಗಾಮಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹ ಗುರುವಾರವೂ ಮುಂದುವರಿದಿದ್ದು ಇಂದು ನೌಕರರು ಭಿಕ್ಷಾಟನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
</p><p>ಜ. 22ರಿಂದ ಜಿಲ್ಲಾಡಳಿತ ಭವನದ ಮುಂದೆ ಧರಣಿ ಆರಂಭವಾಗಿದೆ. ತಮ್ಮ ಬೇಡಿಕೆ ಇನ್ನೂ ಈಡೇರದ ಕಾರಣ ನಮ್ಮ ಕುಟುಂಬವನ್ನು ಸಲಹಲು ಭಿಕ್ಷಾಟನೆ ಮಾಡುತ್ತಿದ್ದೇವೆ ಎಂದು ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಲಾಲ್ಸಾಬ್ ಮನಿಯಾರ್ ಹೇಳಿದರು.</p><p>ಭಿಕ್ಷಾಟನೆ ಪ್ರತಿಭಟನೆ ನಡೆಸಿದ ಸಂದರ್ಭ ಜಿಲ್ಲಾಡಳಿತ ಭವನದ ರಸ್ತೆ ಬಂದ್ ಮಾಡದಂತೆ ಪೊಲೀಸರು ಕೋರಿದರು. ಈ ಸಂದರ್ಭ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಸಂಜೆವರೆಗೂ ಧರಣಿ ಮುಂದುವರಿದಿದೆ.</p><p>ಹೈದರಾಬಾದ್ - ಕರ್ನಾಟಕ ಪ್ರದೇಶಾಭಿವೃದ್ಧಿಯ ಸಂವಿಧಾನದ ಅನುಚ್ಛೇದ 371(ಜೆ) ಅಡಿ ನೌಕರರನ್ನು ಕಾಯಂಗೊಳಿಸಬೇಕು. ಇದು ಜಿಲ್ಲಾಧಿಕಾರಿ ಹಂತದಲ್ಲೇ ನಡೆಯಬೇಕು. ಮೇಲ್ದರ್ಜೆಗೇರಿದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದೆ ಗ್ರಾಮ ಪಂಚಾಯಿತಿಯಲ್ಲಿದ್ದ ನೌಕರರನ್ನು ಅತಂತ್ರಗೊಳಿಸಿರುವುದು ಸಲ್ಲದು. ಪ್ರತಿ ನೌಕರರಿಗೂ ಕನಿಷ್ಠ ವೇತನ ಜಾರಿಗೊಳಿಸಬೇಕು. ಜಿಲ್ಲೆಯ ಎಲ್ಲ ನೌಕರರಿಗೂ ಮುಂಬಡ್ತಿ ನೀಡಬೇಕು. ಐ.ಪಿಡಿ.ಸಾಲಪ್ಪ ಅವರ ವರದಿಯ 36 ಅಂಶಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ವೇತನವನ್ನು ಎಸ್ಎಫ್ಸಿ ನಿಧಿಯಿಂದ ನೀಡಬೇಕು. ಪ್ರತಿ ತಿಂಗಳ 10ನೇ ದಿನಾಂಕದ ಒಳಗೆ ಕಡ್ಡಾಯವಾಗಿ ವೇತನ ಪಾವತಿಸಬೇಕು. ನೌಕರರಿಗೆ ಕಿರುಕುಳ ನೀಡುವ ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.</p><p>ಜಿಲ್ಲಾ ಕಾರ್ಯದರ್ಶಿ ದಗಡಪ್ಪ ಹುಲಿಹೈದರ ಇದ್ದರು.</p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.