ಮೈಸೂರು: ‘ನಾವು ಭಾರತೀಯರು, ನಮ್ಮನ್ನು ಪಾಕಿಸ್ತಾನಿಗಳಂತೆ ಶಿಕ್ಷಿಸದಿರಿ...’
ಹೀಗೆ ಪ್ರತಿಕ್ರಿಯಿಸಿರುವುದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು. ‘ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನಿಗಳ ಜೀವ ಉಳಿಸುತ್ತಿದ್ದಾರೆ; ಆದರೆ, ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ಕೆಎಸ್ಒಯು ವಿದ್ಯಾರ್ಥಿಗಳನ್ನು ಕೊಲ್ಲುತ್ತಿದ್ದಾರೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕೆಎಸ್ಒಯುಗೆ ಮಾನ್ಯತೆ ನೀಡಲು ಕೇಂದ್ರ ಸರ್ಕಾರಕ್ಕೆ ಆಸಕ್ತಿಯಿಲ್ಲ. ವಿ.ವಿ.ಗೆ ಮಾನ್ಯತೆ ಕೊಡಿಸಲು ಜಾವಡೇಕರ್ ಅವರಿಗೆ ಸಾಧ್ಯವಾಗದೇ ಇದ್ದಲ್ಲಿ ರಾಜೀನಾಮೆ ಕೊಟ್ಟು ಮನೆಗೆ ತೆರಳಲಿ. ವಿದ್ಯಾರ್ಥಿಗಳ ಜೀವನದ ಜತೆ ಆಟವಾಡಬೇಡಿ ಎಂದು ನೇರವಾಗಿ ಟ್ವೀಟ್ ಮಾಡಿದ್ದಾರೆ.
‘ವಿ.ವಿ ಪ್ರಮಾಣ ಪತ್ರ ಹೊಂದಿರುವ ನಾವು 3 ವರ್ಷಗಳಿಂದ ತೊಂದರೆ ಅನುಭವಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಈಗಲಾದರೂ ನಮಗೆ ನ್ಯಾಯ ದೊರಕಿಸಿಕೊಡಲಿ’ ಎಂದು ಮೊರೆಯಿಟ್ಟಿದ್ದಾರೆ.
ಕೆಎಸ್ಒಯುಗೆ ಮಾನ್ಯತೆ ಸಿಗದಿರುವುದಕ್ಕೆ ಟ್ವಿಟರ್ನಲ್ಲಿ ವಿದ್ಯಾರ್ಥಿಗಳು ಟೀಕೆ ಮುಂದುವರಿಸಿದ್ದಾರೆ. ಕಳೆದ ವಾರ ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಸಚಿವ ಜಾವಡೇಕರ್ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಸ್ಥಳೀಯರು, ಹೋರಾಟಗಾರರು ಸಚಿವರ ಭೇಟಿಗೆ ಪ್ರಯತ್ನಿಸಿದ್ದರು. ಭೇಟಿಗೆ ಅವಕಾಶ ಆಗಲಿಲ್ಲ. ಆನಂತರ ಸಚಿವರು, ಕೇಂದ್ರ ಸರ್ಕಾರದ ವಿರುದ್ಧ ಟ್ವಿಟರ್ ಸಮರ ಆರಂಭವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.