ADVERTISEMENT

ಚುನಾವಣಾ ಕಣಕ್ಕೆ ಜನಸಂಗ್ರಾಮ ಪರಿಷತ್‌: ಶೀಘ್ರ ನಿರ್ಧಾರ

4 ಜಿಲ್ಲೆಗಳಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST
ಚುನಾವಣಾ ಕಣಕ್ಕೆ ಜನಸಂಗ್ರಾಮ ಪರಿಷತ್‌: ಶೀಘ್ರ ನಿರ್ಧಾರ
ಚುನಾವಣಾ ಕಣಕ್ಕೆ ಜನಸಂಗ್ರಾಮ ಪರಿಷತ್‌: ಶೀಘ್ರ ನಿರ್ಧಾರ   

ಗದಗ: ‘ಜನಸಂಗ್ರಾಮ ಪರಿಷತ್‌ ಹಾಗೂ ಜನಾಂದೋಲನ ಮಹಾಮೈತ್ರಿಯ 23ಸಂಘಟನೆಗಳ ಸಹಯೋಗದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಯೋಜನೆ ಇದ್ದು, ಈ ಕುರಿತು ಫೆ.7ರಂದು ಧಾರವಾಡದಲ್ಲಿ ನಡೆಯುವ ಸಭೆಯಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್.ಆರ್.ಹಿರೇಮಠ ಇಲ್ಲಿ ಹೇಳಿದರು.

‘ಚುನಾವಣೆ ನಮ್ಮ ಹೊಣೆ; ಜನತಂತ್ರದೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಡಿ ಫೆ.24ರಿಂದ ಮಾ.2ರವರೆಗೆ ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಮತದಾರರ ಜಾಗೃತಿ ಜಾಥಾ ಹಾಗೂ ಸಮಾವೇಶ ನಡೆಯಲಿದೆ. ರೈತರ ಸಮಸ್ಯೆ, ಭ್ರಷ್ಟಾಚಾರ, ನಿರುದ್ಯೋಗ, ಆರೋಗ್ಯ ಮತ್ತು ಶಿಕ್ಷಣದ ಖಾಸಗೀಕರಣ ಈ ನಾಲ್ಕು ಸಮಸ್ಯೆಗಳ ಕುರಿತು ಜಾಥಾದಲ್ಲಿ ಗಮನ ಸೆಳೆಯಲಾಗುವುದು ಹಾಗೂ  ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ (ಜೆಸಿಬಿ) ಪಕ್ಷಗಳನ್ನು ತಿರಸ್ಕರಿಸುವಂತೆ ಈ ವೇಳೆ ಮತದಾರರಲ್ಲಿ ಮನವಿ ಮಾಡಲಾಗುವುದು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಫೆ.24ರಂದು ಕೂಡಲಸಂಗಮದಿಂದ ಜಾಥಾ ಪ್ರಾರಂಭಗೊಳ್ಳಲಿದ್ದು, ಫೆ. 25ರಂದು ನವಲಗುಂದದಲ್ಲಿ, ಫೆ.27ರಂದು ಗದುಗಿನಲ್ಲಿ ಸಮಾವೇಶ ನಡೆಯಲಿದೆ. ಗದುಗಿನ ಸಮಾವೇಶದಲ್ಲಿ ತೋಂಟದ ಶ್ರೀಗಳು ಸಾನ್ನಿಧ್ಯ ವಹಿಸುವರು. ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಭಾಗವಹಿಸುವರು. ಫೆ. 28ರಂದು ಶಿಶುನಾಳದಲ್ಲಿ ಜಾಥಾ ನಡೆಯಲಿದ್ದು, ಮಾ.2ರಂದು ಹಾವೇರಿಯಲ್ಲಿ ಕೊನೆಗೊಳ್ಳಲಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.