ಹಾನಗಲ್/ಶಿರಸಿ: ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಮೈಲಾರ ಜಾತ್ರೆಗೆ ಹೋಗಿ ಅಲ್ಲಿ ಆಹಾರ, ನೀರು ಸೇವಿಸಿದ್ದ ಹಾನಗಲ್ ತಾಲ್ಲೂಕಿನ ಹೊಂಕಣ ಗ್ರಾಮದ 100ಕ್ಕೂ ಹೆಚ್ಚು ಜನರು ವಾಂತಿ– ಬೇಧಿಯಿಂದ ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಹೊಂಕಣ ಗ್ರಾಮದ ಪುಟ್ಟವ್ವ ರಾಮಪ್ಪ ಅಂಬಿಗೇರ (58) ಸೋಮವಾರ ಮೃತಪಟ್ಟಿದ್ದಾರೆ.
ಭಾನುವಾರ ಸಂಜೆಯಿಂದ ಸೋಮವಾರ ಮಧ್ಯಾಹ್ನದ ತನಕ ವಾಂತಿ, ಬೇಧಿ ಉಲ್ಬಣಿಸಿದವರು ಶಿರಸಿ, ಹಾನಗಲ್, ಅಕ್ಕಿಆಲೂರ, ಹಾವೇರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
‘ಜಾತ್ರೆಗೆ ಹೋಗುವಾಗ ಬುತ್ತಿ ಕಟ್ಟಿಕೊಂಡು ಹೋಗಿ ಅಲ್ಲಿಯೇ ಊಟ ಮಾಡುವುದು ನಮ್ಮ ಸಂಪ್ರದಾಯ. ಊಟ ಮಾಡುವಾಗ ಅಲ್ಲಿನ ನೀರು ಕುಡಿದ ಕೆಲವರಿಗೆ ಮರುದಿನವೇ ಅನಾರೋಗ್ಯ ಕಾಡಿದೆ’ ಎಂದು ಶಿರಸಿಯ ಟಿಎಸ್ಎಸ್ ಆಸ್ಪತ್ರೆಗೆ ದಾಖಲಾಗಿರುವ ಕೊಟ್ರೇಶಿ ಹೇಳಿದರು.
ಹೊಂಕಣಯ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಬೆಳಿಗ್ಗೆಯಿಂದ ತಾತ್ಕಾಲಿಕ ಆಸ್ಪತ್ರೆಯನ್ನು ತೆರೆಯಲಾಗಿದ್ದು, ಮೈಲಾರ ಜಾತ್ರೆಗೆ ಹೋಗಿ ಬಂದ ಗ್ರಾಮದ ಜನರನ್ನು ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.