ವಿಟ್ಲ: ಕಾರುಗಳನ್ನು ಸಾಗಣೆ ಮಾಡುತ್ತಿದ್ದ ಕಂಟೇನರ್ ಲಾರಿಯೊಂದು ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರಿನಲ್ಲಿ ಬುಧವಾರ ಬೆಳಿಗ್ಗೆ ರೈಲ್ವೆ ಮೇಲುಸೇತುವೆಯ ಸೇಫ್ ಗಾರ್ಡ್ಗೆ ಡಿಕ್ಕಿ ಹೊಡೆದು ರಸ್ತೆ ಮಧ್ಯದಲ್ಲಿ ಸ್ಥಗಿತಗೊಂಡಿದ್ದರಿಂದ ಎರಡು ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿತು.
ಮೈಸೂರು ಕಡೆಯಿಂದ ಕಂಟೇನರ್ ಲಾರಿ ಮಂಗಳೂರಿನತ್ತ ಹೋಗುತಿತ್ತು. ಮೇಲ್ಸೇತುವೆಯನ್ನು ದಾಟಿಕೊಂಡು ಮುಂದೆ ಹೋದಾಗ ಕಂಟೇನರ್ನ ಮೇಲ್ಭಾಗವು ರೈಲ್ವೆ ಸೇತುವೆಯ ರಕ್ಷಣಾ ನಿರ್ಮಾಣಕ್ಕೆ ಡಿಕ್ಕಿ ಹೊಡೆಯಿತು. ಇದರಿಂದ ಕಬ್ಬಿಣದ ಬೀಮ್ ಲಾರಿಯ ಮೇಲೆ ಉರುಳಿ ಬಿದ್ದಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಲಾರಿಯನ್ನು ಚಾಲಕ ಹಿಂದೆ ಚಲಾಯಿಸಿದ್ದಾನೆ. ಇದರಿಂದ ರಸ್ತೆಯ ಅಡ್ಡಕ್ಕೆ ನಿಂತುಬಿಟ್ಟಿತು. ಲಾರಿ ಮುಂಭಾಗ ರಸ್ತೆಯಿಂದ ಕೆಳಭಾಗಕ್ಕೆ ಇಳಿದು ಸಿಕ್ಕಿಹಾಕಿಕೊಂಡಿತ್ತು. ಹೀಗಾಗಿ ವಾಹನ ತೆರವುಗೊಳಿಸುವುದು ವಿಳಂಬವಾಯಿತು.
ಸೇತುವೆ ಕುಸಿದಿದೆ ಎಂಬ ವದಂತಿ
ಸಾಮಾಜಿಕ ಜಾಲದಲ್ಲಿ ಮಿತ್ತೂರಿನ ರೈಲ್ವೆ ಮೇಲುಸೇತುವೆ ಕುಸಿದಿದೆ ಎಂಬ ವದಂತಿ ಹರಡಿತ್ತು. ಆತಂಕ್ಕೀಡಾದ ಸುತ್ತಮುತ್ತಲಿನ ಜನರು ಗುಂಪುಗುಂಪಾಗಿ ಸ್ಥಳಕ್ಕೆ ಧಾವಿಸಿದ್ದರು. ರೈಲ್ವೆ ಇಲಾಖೆ ಕೂಡಾ ರೈಲು ಸಂಚಾರ ಸ್ಥಗಿತಗೊಳಿಸುವ ಹಂತಕ್ಕೆ ತಲುಪಿತ್ತು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ವದಂತಿ ಎಂದು ಅರಿವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.