ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರದಲ್ಲಿನ ಬೀದರ್–ಕಲಬುರ್ಗಿ ರೈಲು ಮಾರ್ಗ ಮಂಜೂರು ಕುರಿತು ಸಂಸತ್ನಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಮೋದಿ ಅವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
‘ಎಂದಿನಂತೆ ಪ್ರಧಾನಿ ಅವರು ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಕರ್ನಾಟಕದ ಜನರನ್ನು ಸುಲಭವಾಗಿ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ’ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
'ವಾಜಪೇಯಿ ಪ್ರಧಾನಿಯಾಗಿದ್ದಾಗ ಬೀದರ್ ಮತ್ತು ಕಲಬುರ್ಗಿ ನಡುವಣ ರೈಲು ಮಾರ್ಗ ಮಂಜೂರು ಮಾಡಲಾಗಿತ್ತು ಎಂಬುದನ್ನು ಖರ್ಗೆ ಅವರು ಮಂಗಳವಾರ ಹೇಳಲಿಲ್ಲ. ವಾಸ್ತವದಲ್ಲಿ 2004ರಿಂದ 2013ರ ಅವಧಿಯವರೆಗೆ 110 ಕಿಲೋ ಮೀಟರ್ ಉದ್ದದ ಈ ಮಾರ್ಗದ ಕಾಮಗಾರಿ 37 ಕಿಲೋಮೀಟರ್ವರೆಗೆ ಮಾತ್ರ ಪೂರ್ಣಗೊಂಡಿತ್ತು. ಖರ್ಗೆ ಅವರೇ ರೈಲ್ವೆ ಸಚಿವರಾಗಿದ್ದರೂ ತಮ್ಮ ಕ್ಷೇತ್ರದ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಬಿಎಸ್ವೈ ಸರ್ಕಾರದ ಅವಧಿಯಲ್ಲಿ ಅನುಮೋದನೆ ನೀಡುವ ಕೆಲಸ ಪ್ರಾರಂಭವಾಯಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳಿಸಿ ಸಂಚಾರ ಮುಕ್ತಗೊಳಿಸಲಾಗಿದೆ' ಎಂದು ಬರೆದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ ಅನ್ನು ಉಲ್ಲೇಖಿಸಿ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ. ಜತೆಗೆ, ಫ್ಯಾಕ್ಟ್ ಚೆಕ್ ಇಂಡಿಯಾದ ಟ್ವೀಟ್ಅನ್ನೂ ಉಲ್ಲೇಖಿಸಿದ್ದಾರೆ.
* ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.