ADVERTISEMENT

ಪಕ್ಷದಲ್ಲಿ ಈಗ ಬದ್ಧತೆ ಉಳಿದಿಲ್ಲ; ಸ್ವಾರ್ಥ ರಾಜಕಾರಣ ಹೆಚ್ಚಿದೆ: ಕಾಂಗ್ರೆಸ್ ಶಾಸಕ ಮಾಲಕ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 10:23 IST
Last Updated 10 ಫೆಬ್ರುವರಿ 2018, 10:23 IST
ಪಕ್ಷದಲ್ಲಿ ಈಗ ಬದ್ಧತೆ ಉಳಿದಿಲ್ಲ; ಸ್ವಾರ್ಥ ರಾಜಕಾರಣ ಹೆಚ್ಚಿದೆ: ಕಾಂಗ್ರೆಸ್ ಶಾಸಕ ಮಾಲಕ ರೆಡ್ಡಿ
ಪಕ್ಷದಲ್ಲಿ ಈಗ ಬದ್ಧತೆ ಉಳಿದಿಲ್ಲ; ಸ್ವಾರ್ಥ ರಾಜಕಾರಣ ಹೆಚ್ಚಿದೆ: ಕಾಂಗ್ರೆಸ್ ಶಾಸಕ ಮಾಲಕ ರೆಡ್ಡಿ   

ಯಾದಗಿರಿ: ‘ಪಕ್ಷದ ಆಂತರಿಕ ಬೆಳವಣಿಗೆಯಿಂದ ಬೇಸತ್ತು ಈಚೆಗೆ ಚುನಾವಣಾ ನಿವೃತ್ತಿ ಘೋಷಿಸಿದ್ದ ಕಾಂಗ್ರೆಸ್ ಶಾಸಕ ಡಾ.ಎ.ಬಿ.ಮಾಲಕ ರೆಡ್ಡಿ ನಿವೃತ್ತಿ ಹಿಂಪಡೆಯುವ ವಿಚಾರದಲ್ಲಿ ಮರು ಪರಿಶೀಲಿಸುತ್ತೇನೆ’ ಎಂಬುದಾಗಿ ಶನಿವಾರ ಪ್ರಕಟಿಸಿದರು.

ನಿವೃತ್ತಿ ಹಿಂಪಡೆದು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿ ಡಾ.ಎ.ಬಿ.ಮಾಲಕರಡ್ಡಿ ಅಭಿಮಾನಿ ಬಳಗದ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಶಾಸಕರ ನಿವಾಸದ ಎದುರು ಜಮಾಯಿಸಿ ತಮ್ಮ ನಿಲುವು ಬದಲಾಯಿಸುವಂತೆ ಪ್ರತಿಭಟನೆ ನಡೆಸಿದರು. ನಿವೃತ್ತಿಯ ನಿಲುವು ಬದಲಾಯಿಸುವಂತೆ ಪರಿಪರಿಯಾಗಿ ಬೇಡಿಕೊಂಡರು.

ಪ್ರತಿಭಟನಾನಿರತರನ್ನು ಸಮಾಧಾನಪಡಿಸಿದ ಶಾಸಕ ಮಾಲಕರಡ್ಡಿ ಅವರು,‘ಪಕ್ಷದಲ್ಲಿ ಈಗ ಬದ್ಧತೆ ಉಳಿದಿಲ್ಲ. ಸ್ವಾರ್ಥ ರಾಜಕಾರಣ ಹೆಚ್ಚಿದೆ. ಹಿರಿಯತನಕ್ಕೆ, ಅನುಭವಕ್ಕೆ ಅಲ್ಲಿ ಬೆಲೆ ಸಿಗುತ್ತಿಲ್ಲ. ರಾಜ್ಯ ರಾಜಕಾರಣ ದೆಹಲಿಗೆ ಸೀಮಿತವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ನಿವೃತ್ತಿ ಪಡೆಯಲು ಇಚ್ಛಿಸಿದ್ದೇನೆ’.

ADVERTISEMENT

ಆದರೆ, ನಿಮ್ಮೆಲ್ಲರ ಪ್ರೀತಿಗಿಂತ ಯಾವುದೂ ದೊಡ್ಡದಿಲ್ಲ. ಪಕ್ಷದ ಹೈಕಮಾಂಡ್, ವರಿಷ್ಠರ ಜತೆಗೆ ಚರ್ಚಿಸಿದ ನಂತರ ಚುನಾವಣಾ ನಿವೃತ್ತಿ ಕುರಿತು ಮರು ಪರಿಶೀಲಿಸುವುದಾಗಿ ಭರವಸೆ ನೀಡಿದರು.

‘ರಾಜ್ಯ ರಾಜಕಾರಣದ ನಿರ್ಧಾರಗಳು ದೆಹಲಿಯಲ್ಲಿ ನಡೆಯುತ್ತಿವೆ. ಇದು ಪಕ್ಷದ ಬೆಳವಣಿಗೆಯ ಹಿತದೃಷ್ಟಿಯಿಂದ ಸರಿಯಲ್ಲ. ಈ ಕಾರಣದಿಂದಾಗಿಯೇ ಕಾಂಗ್ರೆಸ್‌ ದೇಶದ 544 ಸಂಸದೀಯ ಕ್ಷೇತ್ರಗಳಲ್ಲಿ 500 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಪಕ್ಷದಲ್ಲಿ ಹೆಚ್ಚುತ್ತಿರುವ ಏಕವ್ಯಕ್ತಿ ಸ್ವಾರ್ಥ ರಾಜಕಾರಣಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.

ರಾಜ್ಯರಾಜಕಾರಣದಲ್ಲಿ ಮೂಗು ತೂರಿಸುವವರನ್ನು ಹೈಕಮಾಂಡ್‌ ದೂರ ಇಡಬೇಕು’ ಎಂದು ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಲಕರಡ್ಡಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.