ಮಂಗಳೂರು: ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ ಶಾಸಕ ಹ್ಯಾರಿಸ್ ಪುತ್ರನ ಮೇಲೆ ಪ್ರಕರಣ ದಾಖಲಿಸಲು ವಿಳಂಬ ಮಾಡಲಾಯಿತು ಎಂದು ಆರೋಪಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಕರಣದ ಕುರಿತು ಚರ್ಚೆ ನಡೆಯಲಿ ಎಂಬ ಉದ್ದೇಶದಿಂದ ತಪ್ಪು ಮಾಹಿತಿ ನೀಡಿದ್ದೇನೆ ಎಂದರು.
ಅಮಿತ್ ಶಾ ಹೇಳಿಕೆ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಅವರು ತಮ್ಮ ಹೇಳಿಕೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. ‘ವಿದ್ವತ್ ಬಿಜೆಪಿ ಕಾರ್ಯಕರ್ತ ಅಲ್ಲ. ಪ್ರಕರಣದ ಕುರಿತು ಚರ್ಚೆ ನಡೆಯಲಿ ಎಂಬ ಉದ್ದೇಶದಿಂದ ತಪ್ಪು ಮಾಹಿತಿ ನೀಡಿದ್ದೇನೆ’ ಎಂದರು.
ಕರ್ನಾಟಕದ ಜನರು ಗೂಂಡಾ ಆಡಳಿತದಿಂದ ಉತ್ತಮ ಆಡಳಿತದತ್ತ ಹೋಗಲು ಕಾತರಿಸುತ್ತಿದ್ದಾರೆ. ಚುನಾವಣೆ ಫಲಿತಾಂಶ ಬಂದ ದಿನ ಇದು ಗೊತ್ತಾಗುತ್ತದೆ. ಕರ್ನಾಟಕದಲ್ಲಿ ಈಗ ಕಾನೂನಿನ ಆಡಳಿತವಿಲ್ಲ. ಮಾಫಿಯಾ ಸರ್ಕಾರವಿದೆ. ಮುಸ್ಲಿಮರ ತುಷ್ಟೀಕರಣ ಜಾಸ್ತಿಯಾಗಿದೆ. ಪಿಎಫ್ಐ, ಎಸ್ಡಿಪಿಐ ದುಷ್ಕೃತ್ಯಗಳಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರದ್ದು ಹಗರಣಗಳ ಸರ್ಕಾರ. ನಮ್ಮ ಬಳಿ 19 ಹಗರಣಗಳ ಪಟ್ಟಿ ಇದೆ. ಸಚಿವ ಸಂಪುಟದಿಂದ ಗ್ರಾಮಗಳವರೆಗೆ ಭ್ರಷ್ಟಾಚಾರ ಹಬ್ಬಿದೆ. ಜನರು ಬೇಸತ್ತು ಹೋಗಿದ್ದಾರೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ತರಲು ಕಾತರಿಸುತ್ತಿರುವುದು ನೇರವಾಗಿ ಕಾಣಿಸುತ್ತಿದೆ.
'ಬಿಜೆಪಿ ಯಾವುದೇ ಅಭ್ಯರ್ಥಿಗಳ ಹೆಸರಿನಲ್ಲಿ ಚುನಾವಣೆ ಎದುರಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಹೆಸರಿನಲ್ಲಿ ಚುನಾವಣೆ ಎದುರಿಸುತ್ತೇವೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.