ಬೆಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ 577 ಕಾನ್ಸ್ಟೆಬಲ್ಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬೇರೆ ಕೆಲಸಕ್ಕೆ ಸೇರಿದ್ದಾರೆ.
ಪೊಲೀಸ್ ಇಲಾಖೆ ನೇಮಕಾತಿ ಅಂಕಿ– ಅಂಶಗಳಿಂದ ಈ ಸಂಗತಿ ಗೊತ್ತಾಗಿದೆ.
‘ಇಲಾಖೆ ನೀಡುವ ಕಡಿಮೆ ಸಂಬಳ, ರಜೆ ಸಿಗದಿರುವುದು, ಬಡ್ತಿ ಸೇರಿದಂತೆ ಹಲವು ಸೌಲಭ್ಯ ದೊರೆಯದಿದ್ದರಿಂದ ಬೇಸತ್ತು ಕಾನ್ಸ್ಟೆಬಲ್ಗಳು ಕೆಲಸ ಬಿಟ್ಟಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ.
‘ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಕಾನ್ಸ್ಟೆಬಲ್ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ರಾಜ್ಯದ ವಿವಿಧ ನಗರಗಳಲ್ಲಿರುವ ಪೊಲೀಸ್ ಅಕಾಡೆಮಿಗಳಲ್ಲಿ ತರಬೇತಿ ನೀಡಲಾಗುತ್ತದೆ. ಇಂಥ ತರಬೇತಿ ವೇಳೆಯಲ್ಲೂ ಕಾನ್ಸ್ಟೆಬಲ್ಗಳಿಗೆ ರಜೆ ಸಿಗುತ್ತಿಲ್ಲ. ಹೀಗಾಗಿ, ಅವರು ಬೇರೆ ಕೆಲಸಗಳತ್ತ ಮುಖ ಮಾಡುತ್ತಿದ್ದಾರೆ’ ಎಂದು ತಿಳಿಸುತ್ತಾರೆ.
‘ಒಬ್ಬ ಕಾನ್ಸ್ಟೆಬಲ್ಗೆ ತರಬೇತಿ ನೀಡಲು ಸರ್ಕಾರ ₹ 2 ಲಕ್ಷದಿಂದ ₹ 3 ಲಕ್ಷ ಖರ್ಚು ಮಾಡುತ್ತದೆ. ಈಗ 577 ಮಂದಿ ಕೆಲಸ ಬಿಟ್ಟು ಹೋಗಿರುವುದರಿಂದ, ಅವರಿಗೆ ಖರ್ಚು ಮಾಡಿದ್ದ ಹಣವೆಲ್ಲ ವ್ಯರ್ಥವಾದಂತೆ’ ಎಂದು ಹೇಳುತ್ತಾರೆ.
‘ಸದ್ಯ ಕಾನ್ಸ್ಟೆಬಲ್ಗೆ ತಲಾ ₹ 25 ಸಾವಿರದಿಂದ 28 ಸಾವಿರ ಸಂಬಳ ಇದೆ. ಅದರಲ್ಲಿ ₹ 20 ಸಾವಿರದಿಂದ ₹ 23 ಸಾವಿರ ಮಾತ್ರ ಕೈಗೆ ಸಿಗುತ್ತದೆ. ಕ್ಯಾಬ್ ಚಾಲಕರೇ ಅದಕ್ಕಿಂತ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. ವೇತನ ಪರಿಷ್ಕರಣೆ ಸಂಬಂಧ ರಾಘವೇಂದ್ರ ಔರಾದಕರ್ ನೀಡಿರುವ ವರದಿ ಜಾರಿಗೆ ಸರ್ಕಾರ ಹಿಂದೇಟು ಹಾಕುತ್ತಿದೆ. ಇದು ಪೊಲೀಸರಿಗೆ ನಿರಾಶೆಯನ್ನುಂಟು ಮಾಡಿದೆ’ ಎಂದು ದೂರುತ್ತಾರೆ.
**
ಕಾನ್ಸ್ಟೆಬಲ್ಗಳ ನೇಮಕಾತಿ ವಿವರ (2014ರಿಂದ 2018ರವರೆಗೆ)
ವಿಭಾಗ | ನೇಮಕಾತಿ ಆದವರು | ಕೆಲಸ ಬಿಟ್ಟವರು |
ಸಿವಿಲ್ ಪೊಲೀಸ್ | 12, 408 | 337 |
ನಗರ ಸಶಸ್ತ್ರ ಮೀಸಲು ಪಡೆ | 5,060 | 93 |
ರಾಜ್ಯ ಮೀಸಲು ಪೊಲೀಸ್ ಪಡೆ | 4,023 | 147 |
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.