ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಅದಲು–ಬದಲು ಮಾಡುವ ಜತೆಗೆ, ಮತ್ತೆ 6 ಮಂದಿಗೆ ವಿವಿಧ ನಿಗಮಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.
ಬಿಎಂಟಿಸಿ ಅಧ್ಯಕ್ಷ ಸ್ಥಾನಕ್ಕೆ ನಿಕೇತ್ ರಾಜ್ ಮೌರ್ಯ ಅವರನ್ನು, ಉಪಾಧ್ಯಕ್ಷ ಸ್ಥಾನಕ್ಕೆ ವಿ.ಎಸ್. ಆರಾಧ್ಯ ಅವರನ್ನು ನೇಮಕ ಮಾಡಲಾಗಿತ್ತು. ನಿಕೇತ್ ಅವರು ಈಗಾಗಲೇ ಅಧಿಕಾರವನ್ನೂ ಸ್ವೀಕರಿಸಿದ್ದರು. ಸೋಮವಾರ ಹೊರಡಿಸಲಾದ ಮತ್ತೊಂದು ಆದೇಶದಲ್ಲಿ ಇಬ್ಬರ ಸ್ಥಾನವನ್ನು ಅದಲು ಬದಲು ಮಾಡಲಾಗಿದೆ.
ಕಲಬುರಗಿಯ ಸೈಯದ್ ಮಹಮದ್ ಚಿಸ್ತಿ (ತೊಗರಿ ಅಭಿವೃದ್ಧಿ ಮಂಡಳಿ), ವಿಜಯಪುರದ ಬಿ.ಎಸ್.ಕವಲಗಿ (ಲಿಂಬೆ ಅಭಿವೃದ್ಧಿ ಮಂಡಳಿ), ಚಿಕ್ಕಬಳ್ಳಾಪುರದ ಅಂಜನಪ್ಪ (ರಾಜ್ಯ ಬೀಜ ನಿಗಮ), ಕಲಬುರಗಿಯ ನೀಲಕಂಠರಾವ್ ಎಸ್.ಮೂಲ (ಸಾಂಬಾರು ಅಭಿವೃದ್ಧಿ ಮಂಡಳಿ) ಶರಣಪ್ಪ ಸಲಾದ್ಪುರ್ (ಮದ್ಯಪಾನ ಸಂಯಮ ಮಂಡಳಿ) ಅವರನ್ನು ಅಧ್ಯಕ್ಷರಾಗಿ, ಕಲಬುರಗಿಯ ಅನಿಲ್ಕುಮಾರ್ ಜಾಮದಾರ್ ಅವರನ್ನು ಬೆಂಗಳೂರಿನ ಜವಾಹರ ಬಾಲಭವನ ಸೊಸೈಟಿ ಉಪಾಧ್ಯಕ್ಷರಾನ್ನಾಗಿ ನೇಮಕ ಮಾಡಲಾಗಿದೆ.
ಶಾಸಕ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ, ಮಾಜಿ ಶಾಸಕ ಎನ್. ಸಂಪಂಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಅಗಾ ಸುಲ್ತಾನ್, ಎಂ.ಎ. ಗಫೂರ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್ ಸೇರಿದಂತೆ ಒಟ್ಟು 39 ಮಂದಿಗೆ ವಾರದ ಹಿಂದೆ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಹೈಕಮಾಂಡ್ ಕರುಣಿಸಿತ್ತು. ಒಟ್ಟು 45 ಮಂದಿಗೆ ಸ್ಥಾನಮಾನ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.