ಬೆಂಗಳೂರು: 2007 ರಲ್ಲಿ ಅನುಮೋದನೆಗೊಂಡಿದ್ದ ರಾಜ್ಯದ 9 ರೈಲ್ವೇ ಯೋಜನೆಗಳನ್ನು 2022 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ವಸತಿ ಮತ್ತು ಮೂಲಸೌಲಭ್ಯಗಳ ಅಭಿವೃದ್ಧಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಈ ಯೋಜನೆಗಳ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಗಳ ಅಂದಾಜು ಮೊತ್ತವನ್ನು ಪರಿಷ್ಕರಿಸಲಾಗಿದೆ. ಕಾಲಬದ್ಧವಾಗಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಆಗುವುದಿಲ್ಲ ಎಂದು ಹೇಳಿದರು.
ತುಮಕೂರು– ರಾಯದುರ್ಗ ರೈಲು ಮಾರ್ಗ ₹479.59 ಕೋಟಿಯಿಂದ ₹2,432.51 ಕೋಟಿಗೆ, ಗಿಣಿಗೇರಾ–ರಾಯಚೂರು ರೈಲು ಮಾರ್ಗ ₹1,350.91 ಕೋಟಿಯಿಂದ ₹2,565.09 ಕೋಟಿಗೆ, ಕುಡುಚಿ–ಬಾಗಲಕೋಟೆ ರೈಲು ಮಾರ್ಗ ₹816.14 ಕೋಟಿಯಿಂದ ₹1,525 ಕೋಟಿಗೆ ಮತ್ತು ತುಮಕೂರು–ಚಿತ್ರದುರ್ಗ–ದಾವಣಗೆರೆ ರೈಲು ಮಾರ್ಗ ₹1,801 ಕೋಟಿಯಿಂದ ₹2,161.37 ಕೋಟಿಗೆ ಏರಿಕೆಯಾಗಿದೆ. ಈ ನಾಲ್ಕು ಯೋಜನೆಗಳ ಅಂದಾಜು ಮೊತ್ತ ₹4,447.64 ಕೋಟಿಯಿಂದ ₹8,683.97 ಕೋಟಿಗೆ ಏರಿಕೆಯಾಗಿದೆ ಎಂದು ಅವರು ಹೇಳಿದರು.
ಅಲ್ಲದೆ, 59 ಅಂಡರ್ಪಾಸ್ ಮತ್ತು ಮೇಲುರಸ್ತೆಗಳ ಕಾಮಗಾರಿಗಳ ಬಗ್ಗೆಯೂ ಕೂಲಂಕಷ ಚರ್ಚೆ ನಡೆದಿದೆ. ಇವರುಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳುವ ಬಗ್ಗೆ ಕಾರ್ಯದರ್ಶಿಗಳ ಜತೆ ಚರ್ಚೆ ನಡೆಸಿದ್ದೇನೆ. ಈ ಹಿಂದಿನ ಸರ್ಕಾರಗಳು ಈ ಯೋಜನೆಗಳ ಬಗ್ಗೆ ಗಮನಹರಿಸದ ಕಾರಣ ನನೆಗುದಿಯಲ್ಲಿದ್ದವು ಎಂದರು.
ಶಿವಮೊಗ್ಗ, ವಿಜಯಪುರ,ಹಾಸನ, ರಾಯಚೂರು ವಿಮಾನನಿಲ್ದಾಣಗಳು ಮತ್ತು ಕಾರವಾರ ಎನ್ಕ್ಲೇವ್ಗಳ ನಿರ್ಮಾಣ ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲಾಗುವುದು. ಕೆಂಪೇಗೌಡಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಈ ಯೋಜನೆಗಳಿಗೆ ಹಣದ ಕೊರತೆ ಇಲ್ಲ ಎಂದು ಸೋಮಣ್ಣ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.