ಬೆಂಗಳೂರು: ‘ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡಿರುವ ವೃತ್ತಿ ಶಿಕ್ಷಣ (ಜೆಒಸಿ) ಶಿಕ್ಷಕರ ಸಮಸ್ಯೆಗಳಿಗೆ ಇತಿಶ್ರೀ ಹಾಡಿ ಅನುಕೂಲ ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ವಿಲೀನಗೊಂಡ ವೃತ್ತಿ ಶಿಕ್ಷಕರ ಬೇಡಿಕೆಗಳ ಕುರಿತು ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ವಿಲೀನಗೊಳಿಸದೇ ಬಾಕಿ ಉಳಿದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 11 ಭಾಷಾ ಉಪನ್ಯಾಸಕರ ಮತ್ತು 28 ಬೋಧಕೇತರ ಸಿಬ್ಬಂದಿನ್ನು ವಿಲೀನಗೊಳಿಸುವ ಸಂಬಂಧದಲ್ಲಿ ಅನುಮೋದನೆಗಾಗಿ ಕಡತ ಮಂಡಿಸುವಂತೆ ಪಿಯು ನಿರ್ದೇಶಕರಿಗೆ ಸಚಿವರು ನಿರ್ದೇಶನ ನೀಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆಗಳಲ್ಲಿ ವಿಲೀನಗೊಂಡ, ನಿವೃತ್ತಿ ಅಂಚಿನಲ್ಲಿರುವ 95 ಜೆಒಸಿ ಉಪನ್ಯಾಸಕರಿಗೆ ಒಂದು ಬಾರಿ ವಿಶೇಷ ಪ್ರಕರಣವಾಗಿ ಬಿ.ಇಡಿ ವಿನಾಯಿತಿ ನೀಡಿ, ಪ್ರೊಬೇಷನರಿ ಅವಧಿ ಘೋಷಿಸಲೂ ಕೂಡಾ ಕ್ರಮ ಕೈಗೊಳ್ಳಲು ಅಗತ್ಯ ಪ್ರಸ್ತಾವ ಸಲ್ಲಿಸಬೇಕು ಎಂದು ಸೂಚಿಸಿದರು.
ವಿಧಾನಪರಿಷತ್ ಸದಸ್ಯರಾದ ಅರುಣ ಶಹಾಪುರ, ಎಸ್.ವಿ. ಸಂಕನೂರು, ಶಶೀಲ್ ನಮೋಶಿ, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಹನುಮಂತ ನಿರಾಣಿ, ಅ. ದೇವೇಗೌಡ, ವೈ.ಎ. ನಾರಾಯಣಸ್ವಾಮಿ, ಪುಟ್ಟಣ್ಣ, ಮಾಧ್ಯಮಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಗಣೇಶ ಕಾರ್ಣಿಕ್, ಮಾಧ್ಯಮಿಕ ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿ ಹಾಗೂ ಜೆಒಸಿ ಶಿಕ್ಷಕರ ಸಂಘದ ಅಧ್ಯಕ್ಷ ಎ. ಗಂಗಾಧರ ಆಚಾರ್, ಪಿಯು ಇಲಾಖೆ ನಿರ್ದೇಶಕರಾದ ಸ್ನೇಹಲ್ ಸಭೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.