ಕೊಳ್ಳೇಗಾಲ: ನಗರದಲ್ಲಿ ಪತ್ರಿ ನಿತ್ಯ ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಜನಸಾಮಾನ್ಯರು ಪರದಾಡುವ ಸ್ಥಿತಿ ಉದ್ಭವವಾಗಿದೆ.
ನಗರದ ಎಸ್.ಬಿ.ಐ , ಕೊಟಕ್ ಮಹೀಂದ್ರ ಬ್ಯಾಂಕ್, ಮುಖ್ಯ ಅಂಚೆ ಕಚೇರಿಗಳಲ್ಲಿ ಮಾತ್ರ ಆಧಾರ್ ಸೇವೆ ಲಭ್ಯವಿದ್ದು, ನೂರಾರು ಜನರು ಪ್ರತಿ ದಿನ ಇವುಗಳ ಮುಂಭಾಗದಲ್ಲಿ ನಿಂತು ಕಾಯುತ್ತಿದ್ದಾರೆ. ನಿಗದಿತ ಜನರಿಗೆ ಮಾತ್ರ ಸೇವೆ ನೀಡಲಾಗುವುದರಿಂದ ಜನರು ತಡ ರಾತ್ರಿಯೇ ಕೇಂದ್ರಗಳ ಬಳಿ ಬಂದು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.
ಒಂದು ಕೇಂದ್ರದಲ್ಲಿ ದಿನಕ್ಕೆ 25 ಜನರಿಗೆ ಮಾತ್ರ ಅರ್ಜಿ ನೀಡಲಾಗುತ್ತಿದೆ. ತಾಲ್ಲೂಕಿನ ಅನೇಕ ಗ್ರಾಮದವರು ಮೊದಲು ಅರ್ಜಿ ಪಡೆಯುವುದಕ್ಕಾಗಿ ತಡ ರಾತ್ರಿಯೇ ಕೇಂದ್ರಗಳ ಬಳಿಗೆ ಬಂದು ಅಲ್ಲೇ ಮಲಗುತ್ತಿದ್ದಾರೆ. ಇನ್ನು ಕೆಲವರು ಮುಂಜಾನೆಯೇ ಬರುತ್ತಿದ್ದಾರೆ. ಜನರೆಷ್ಟು ಇದ್ದರೂ ಮೊದಲು ಬಂದಿರುವ 25 ಮಂದಿಗೆ ಮಾತ್ರ ಅವಕಾಶ. ಹಾಗಾಗಿ, ಬೇಗ ಬಂದರೂ ಕೆಲಸ ಆಗದ ಸ್ಥಿತಿ ಇದೆ.
ಸಿಬ್ಬಂದಿ 9 ಗಂಟೆಗೆ ಅರ್ಜಿ ವಿತರಿಸಲು ಆರಂಭಿಸುತ್ತಾರೆ. 10.30ಕ್ಕೆ ಬಂದು ಆಧಾರ್ ತಿದ್ದುಪಡಿ ಕೆಲಸ ಆರಂಭಿಸುತ್ತಾರೆ. ಕೆಲಸ ಆರಂಭಿಸುತ್ತಿದಂತೆ ಸರ್ವರ್ ಸಮಸ್ಯೆಯಿಂದಾಗಿ ಅಡಚಣೆಯಾಗುತ್ತದೆ. ಕೇಂದ್ರಗಳಲ್ಲಿ ಕುಳಿತು ಕೊಳ್ಳುವ ವ್ಯವಸ್ಥೆ ಸೇರಿದಂತೆ ಇನ್ನಿತರ ವ್ಯವಸ್ಥೆಗಳೂ ಇಲ್ಲ.
ತಾಲ್ಲೂಕಿನ ಉತ್ತಂಬಳ್ಳಿ, ತೇರಂಬಳ್ಳಿ, ಗೂಬ್ಬಳಿಪುರ, ಟಗರಪುರ, ಕುಂತೂರು, ಮುಳ್ಳೂರು, ಹಂಪಾಪುರ, ದಾಸನಪುರ, ಅಣಗಳ್ಳಿ, ಸರಗೂರು, ಸತ್ತೇಗಾಲ, ಧನಗೆರೆ, ಜಕ್ಕಳಿ, ಜಿನಕನಹಳ್ಳಿ, ಜಾಗೇರಿ, ಗುಂಡೇಗಾಲ, ಪಾಳ್ಯ, ನರೀಪುರ, ಉಗನಿಯ, ಕೆಂಪನಪಾಳ್ಯ, ತಿಮ್ಮರಾಜೀಪುರ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಿಂದ ಜನರು ಬರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಕೆಲಸ ಆಗದೇ ನಿರಾಸೆಯಿಂದ ವಾಪಸ್ ಹೋಗುತ್ತಾರೆ.
ಕೊಳ್ಳೇಗಾಲ ಹಾಗೂ ಇತರ ಕೇಂದ್ರಗಳಲ್ಲಿ ಇನ್ನಷ್ಟು ಕೇಂದ್ರಗಳನ್ನು ತೆರೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.