ಬೆಂಗಳೂರು: ‘ಚಿರತೆ ನನ್ನ ಮನೆಯ ಪ್ರದೇಶದ ಸುತ್ತಮುತ್ತಲೇ ಎಂಟು ದಿನಗಳಿಂದ ಓಡಾಡುತ್ತಿದೆ. ಆದಷ್ಟು ಬೇಗ ಹಿಡಿಸಿ’ ಎಂದು ಕಾಂಗ್ರೆಸ್ನ ಅಬ್ಬಯ್ಯ ಪ್ರಸಾದ್ ವಿಧಾನಸಭೆಯಲ್ಲಿ ಬುಧವಾರ ಪರಿ ಪರಿಯಾಗಿ ಮನವಿ ಮಾಡಿದರು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಹುಬ್ಬಳ್ಳಿಯ ನೃಪತುಂಗ ಗುಡ್ಡದ ಬಳಿ ಚಿರತೆ ಬಂದು ಎಂಟು ದಿನ ಕಳೆದಿವೆ. ನನ್ನ ಮನೆಯೂ ಅಲ್ಲೆ ಇದೆ. ಚಿರತೆಯ ಹೆಜ್ಜೆ ಗುರುತು ಕಾಣಿಸಿದೆ. ಅದು ಪ್ರಾಯಕ್ಕೆ ಬಂದ ಚಿರತೆಯಾಗಿದ್ದು, ಮನುಷ್ಯರಿಗೆ ಏನೂ ಮಾಡುವುದಿಲ್ಲ. ಈಗಾಗಲೇ ಹಂದಿ, ಕುರಿಯನ್ನು ಹೊತ್ತುಕೊಂಡು ಹೋಗಿದೆ. ಸುತ್ತಮುತ್ತಲಿನ ಶಾಲೆಗಳು ಒಂದು ವಾರದಿಂದ ಬಂದ್ ಆಗಿವೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಜಗದೀಶ ಶೆಟ್ಟರ್, ಚಿರತೆಯಿಂದಾಗಿ ಹುಬ್ಬಳ್ಳಿಯಲ್ಲಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಅದನ್ನು ಹಿಡಿಸಿ ಕಾಡಿಗೆ ಬಿಡುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಅರಣ್ಯ ಇಲಾಖೆ ಸಿಬ್ಬಂದಿ ಹುಡುಕುವ ಪ್ರಯತ್ನ ಮಾಡುತ್ತಿದ್ದು, ಪರಿಣಿತರನ್ನು ಕರೆಸಿ, ಚಿರತೆಯನ್ನು ಹಿಡಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.