ADVERTISEMENT

ಲಾಕ್‌ಡೌನ್‌ ಬಳಿಕ ಪುನರಾವರ್ತನಾ ತರಗತಿ ನಡೆಸಲು ಎಬಿವಿಪಿ ಮನವಿ

​ಪ್ರಜಾವಾಣಿ ವಾರ್ತೆ
Published 9 ಮೇ 2020, 14:25 IST
Last Updated 9 ಮೇ 2020, 14:25 IST
   

ಬೆಂಗಳೂರು: ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಆನ್‌ಲೈನ್‌ ತರಗತಿಯಿಂದ ವಂಚಿತರಾಗಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲಾಕ್‌ಡೌನ್‌ ಮುಗಿದ ನಂತರ 20ರಿಂದ 25 ದಿನಗಳ ಕಾಲ ಪುನರಾವರ್ತನಾ ತರಗತಿಗಳನ್ನು ನಡೆಸಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಸದಸ್ಯರು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರ ಬಳಿ ಮನವಿ ಮಾಡಿದ್ದಾರೆ.

ಲಾಕ್‌ಡೌನ್‌ನಿಂದಾಗಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಡಾ.ಅಶ್ವತ್ಥನಾರಾಯಣ ಅವರ ಜತೆ ಶನಿವಾರ ಚರ್ಚೆ ನಡೆಸಿದ ಎಬಿವಿಪಿ ಸದಸ್ಯರು ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ. ಎಬಿವಿಪಿ ಸಲ್ಲಿಸಿರುವ ಸಲಹೆ ಹಾಗೂ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಭರವಸೆ ನೀಡಿದರು.

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ವಾಸ್ತವ ಪರಿಸ್ಥಿತಿ ಕುರಿತು ಸಮೀಕ್ಷೆ ನಡೆಸಿದ ಬಳಿಕ ಶಿಕ್ಷಣ ತಜ್ಞರು, ಅಧ್ಯಾಪಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೆಲ ಬೇಡಿಕೆ ಹಾಗೂ ಸಲಹೆಗಳನ್ನು ಮುಂದಿಟ್ಟಿರುವುದಾಗಿ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ ತಿಳಿಸಿದ್ದಾರೆ.

ADVERTISEMENT

ಎಬಿವಿಪಿ ಸಲಹೆ- ಬೇಡಿಕೆಗಳು

* ನೆಟ್‌ವರ್ಕ್‌ ಸಮಸ್ಯೆಯಿಂದಾಗಿ 20-25% ವಿದ್ಯಾರ್ಥಿಗಳು ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳ ಪ್ರಯೋಜನ ಆಗಿಲ್ಲ ಹಾಗಾಗಿ ಲಾಕ್‌ಡೌನ್‌ ಮುಗಿದ ಬಳಿಕ 20-25 ದಿನಗಳ ಕಾಲ ಪುನರಾವರ್ತನಾ ತರಗತಿಗಳನ್ನು ನಡೆಸಬೇಕು.

*ಲಿಖಿತ ಹಾಗೂ ಪ್ರಾಯೋಗಿಕ ಪರೀಕ್ಷೆಗಳ ಬಗ್ಗೆ ಗೊಂದಲವಿದ್ದು, ಆಯಾ ವಿವಿಗಳ ವ್ಯಾಪ್ತಿಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಒಂದು ಬ್ಯಾಚ್‌ ನಂತರ ಮತ್ತೊಂದು ಬ್ಯಾಚ್‌ ಪರೀಕ್ಷೆ ನಡೆಸಬೇಕು.

*ಕೊವಿಡ್‌ ಸಂಕಷ್ಟದಲ್ಲಿ 3 ವಾರಗಳ ಪರೀಕ್ಷೆ ಮತ್ತು ಮೌಲ್ಯಮಾಪನವನ್ನು ಕಡಿತಗೊಳಿಸಿ, ಕ್ಲಾಸ್ ಟೆಸ್ಟ್‌ ರೀತಿಯ ಪರೀಕ್ಷೆ ನಡೆಸುವ ಕುರಿತು ಆಲೋಚಿಸಬಹುದು.

*ಪರೀಕ್ಷೆ ಮುಗಿಯುವವರೆಗೂ ಬಸ್‌ ಪಾಸ್‌ ಅವಧಿ ವಿಸ್ತರಿಸಬೇಕು.

*ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಹೆಚ್ಚಿಸಬಾರದು ಹಾಗೂ ಬಾಕಿ ಇರುವ ವಿದ್ಯಾರ್ಥಿ ವೇತನ ಪಾವತಿಸಬೇಕು.

*ಎಲ್ಲ ವಿವಿಗಳಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಕೆಲ ವಸತಿ ನಿಲಯಗಳನ್ನು ಕ್ವಾರಂಟೈನ್‌ ಸೆಂಟರ್‌ಗಳನ್ನಾಗಿ ಮಾಡಿರುವುದರಿಂದ ಅವುಗಳ ಸ್ವಚ್ಛತಾ ಕಾರ್ಯ/ಸ್ಯಾನಿಟೈಸ್‌ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.