ಬೆಂಗಳೂರು: ಬಿಬಿಎಂಪಿ ಎಂಜಿನಿಯರ್ ಮನೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ನಡೆಸಿದ ಶೋಧದ ವೇಳೆ ₹50 ಲಕ್ಷ ನಗದು ಮತ್ತು ಒಂದೂಕಾಲು ಕೆ.ಜಿ ಚಿನ್ನ ದೊರೆತಿದೆ.
ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪದಲ್ಲಿ ಬೊಮ್ಮನಹಳ್ಳಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿ.ಟಿ. ಆಂಜನಪ್ಪ ಅವರ ಬೆಂಗಳೂರಿನ ಜೀವನಭಿಮಾನಗರದಲ್ಲಿನ ವಾಸದ ಮನೆ, ಸ್ವಂತ ಊರಾದ ದಾವಣಗೆರೆ ಜಿಲ್ಲೆಯ ಲೋಕಿಕೆರೆ ಗ್ರಾಮದ ವಾಸದ ಮನೆ, ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿಯಲ್ಲಿರುವ ತೋಟದ ಮನೆ, ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ಶುಕ್ರವಾರ ದಾಳಿ ನಡೆಸಲಾಗಿತ್ತು.
ಲೋಕಿಕೆರೆ ಗ್ರಾಮದಲ್ಲಿ 1 ಮನೆ, 8 ಎಕರೆ 21 ಗುಂಟೆ ಕೃಷಿ ಜಮೀನು, ಚನ್ನಗಿರಿ ತಾಲ್ಲೂಕಿನ ವಿವಿಧೆಡೆ 15 ಎಕರೆ 30 ಗುಂಟೆ ಕೃಷಿ ಜಮೀನು, 3 ಕಾರು, 5 ದ್ವಿಚಕ್ರ ವಾಹನ, 1 ಟ್ರ್ಯಾಕ್ಟರ್, 1 ಅಡಕೆ ಒಣಗಿಸುವ ಯಂತ್ರ, 1 ಅಡಕೆ ಸುಲಿಯುವ ಯಂತ್ರ, 1 ಕೆ.ಜಿ 250 ಗ್ರಾಂ ಚಿನ್ನಾರಣ, 8 ಕೆ.ಜಿ ಬೆಳ್ಳಿ ವಸ್ತುಗಳು, ₹50 ಲಕ್ಷ ನಗದು, 13.70 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ₹3.96 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆಎಂದು ಎಸಿಬಿ ಮಾಹಿತಿ ನೀಡಿದೆ.
ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿದಿದೆ. ಅಸಮತೋಲನ ಆಸ್ತಿ ಮೌಲ್ಯ ಶೇ 428.59ರಷ್ಟು ಎಂದು ಎಸಿಬಿ ಅಂದಾಜಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.