ಬೆಂಗಳೂರು: ಸಿಗರೇಟ್ ವಿತರಕರು ಹಾಗೂ ನಕಲಿ ಮಾಸ್ಕ್ ತಯಾರಿಕಾ ಕಂಪನಿಗಳಿಂದ ಲಂಚ ಪಡೆದ ಆರೋಪಕ್ಕೆ ಒಳಗಾಗಿರುವ ಸಿಸಿಬಿ ಎಸಿಪಿ ಪ್ರಭುಶಂಕರ್ ಹಾಗೂ ಇನ್ಸ್ಪೆಕ್ಟರ್ಗಳಾದ ಅಜಯ್ ಮತ್ತು ನಿರಂಜನ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸರ್ಕಾರದ ಅನುಮತಿ ಕೇಳಿದೆ.
ಸಿಸಿಬಿ ಅಧಿಕಾರಿಗಳು ಲಂಚ ಪಡೆದ ಮೂರು ಪ್ರಕರಣಗಳನ್ನು ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆ (ಪಿ.ಸಿ. ಆ್ಯಕ್ಟ್) ಅಡಿ ತನಿಖೆ ನಡೆಸುವಂತೆ ಡಿಜಿ ಮತ್ತು ಐಜಿ ಪ್ರವೀಣ್ ಸೂದ್ ಈಚೆಗೆ ಎಸಿಬಿಗೆ ಆದೇಶಿಸಿದ್ದರು.
ಎಸಿಬಿ ಶುಕ್ರವಾರ ಸರ್ಕಾರ ಹಾಗೂ ಡಿಜಿ ಮತ್ತು ಐಜಿಗೆ ಎರಡು ಪತ್ರಗಳನ್ನು ಬರೆದಿದೆ. ಪ್ರಭುಶಂಕರ್ ವಿರುದ್ಧ ಎಫ್ಐಆರ್ ದಾಖಲಿಸಲು ಅನುಮತಿ ಕೊಡುವಂತೆ ಸರ್ಕಾರಕ್ಕೆ ಕೇಳಲಾಗಿದೆ. ಪ್ರವೀಣ್ ಸೂದ್ಗೆ ಕಳುಹಿಸಿರುವ ಪತ್ರದಲ್ಲಿ ಅಜಯ್, ನಿರಂಜನ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲು ಒಪ್ಪಿಗೆ ನೀಡುವಂತೆ ಕೋರಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 17 (ಎ) ಅನ್ವಯ ಯಾವುದೇ ಸರ್ಕಾರಿ ಅಧಿಕಾರಿಯ ವಿರುದ್ಧ ಎಫ್ಐಆರ್ ದಾಖಲಿಸಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಅಗತ್ಯ. ಆರೋಪ ಸಾಬೀತಾದರೆ ಕನಿಷ್ಠ 3 ರಿಂದ 7 ವರ್ಷ
ದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಲಾಕ್ಡೌನ್ ಸಮಯದಲ್ಲಿ ಅಕ್ರಮ ಸಿಗರೇಟ್ ಮಾರಾಟಕ್ಕೆ ಯಾವುದೇ ತೊಂದರೆ ಆಗದಂತೆ ಅವಕಾಶ ಮಾಡಿ
ಕೊಡಲು ಎಂ.ಡಿ. ಆ್ಯಂಡ್ ಸನ್ಸ್ ಹಾಗೂ
ಮಹಾವೀರ್ ಟ್ರೇಡರ್ಸ್ ಮತ್ತಿತರ ವಿತರಕರಿಂದ ₹ 85 ಲಕ್ಷ ಲಂಚ ಪಡೆದ ಆರೋಪಕ್ಕೆ ಒಂದು ಪ್ರಕರಣ ಸಂಬಂಧಿಸಿದೆ. ಇನ್ನೊಂದು, ಮಾಸ್ಕ್
ತಯಾರಿಕಾ ಕಂಪನಿಯಿಂದ ₹ 15 ಲಕ್ಷ ಲಂಚ ಪಡೆದ ಪ್ರಕರಣವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.