ರಾಮನಗರ: ‘ಲವ್ ಯೂ ರಚ್ಚು’ ಸಿನಿಮಾ ಚಿತ್ರೀಕರಣ ದುರಂತಕ್ಕೆ ಸಂಬಂಧಿಸಿ ಚಿತ್ರದ ನಾಯಕಿ ರಚಿತಾ ರಾಮ್ ಮಂಗಳವಾರ ಸಂಜೆ ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು.
ರಾಮನಗರ ಡಿವೈಎಸ್ಪಿ ಮೋಹನ್ಕುಮಾರ್ ಸುಮಾರು ಅರ್ಧ ಗಂಟೆ ಕಾಲ ನಟಿಯ ವಿಚಾರಣೆ ನಡೆಸಿದರು. ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ರಚಿತಾ ‘ಘಟನೆ ನಡೆದ ದಿನ ನಾನು ಸ್ಥಳದಲ್ಲಿ ಇರಲಿಲ್ಲ. ಈ ಕುರಿತು ಪೊಲೀಸರಿಗೆ ವಿವರಣೆ ನೀಡಿದ್ದೇನೆ. ಕಲಾವಿದನ ಸಾವು ನಿಜಕ್ಕೂ ದುರಂತ. ಆದರೆ ಅದು ಹೇಗೆ ನಡೆಯಿತು ಎಂಬ ಬಗ್ಗೆ ನನಗೆ ತಿಳಿದಿಲ್ಲ. ಸಾಹಸ ದೃಶ್ಯಗಳಲ್ಲಿ ನಟಿಯರಿಗೆ ಹೆಚ್ಚು ಕೆಲಸ ಇರುವುದಿಲ್ಲ. ಹೀಗಾಗಿ ಅಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ತಿಳಿಸಿದರು.
ಘಟನೆ ನಡೆದ ಸಂದರ್ಭ ಸ್ಥಳದಲ್ಲೇ ಇದ್ದ ನಟ ಅಜಯ್ ರಾವ್ ಕಲಾವಿದರ ನೆರವಿಗೆ ಧಾವಿಸಲಿಲ್ಲ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ‘ಈ ಬಗ್ಗೆ ಅಜಯ್ ಅವರನ್ನೇ ಕೇಳಬೇಕು. ಚಿತ್ರೀಕರಣದ ಯಾವುದೇ ಸಂದರ್ಭ ಇಂತಹ ಘಟನೆಗಳಾದಾಗ ಕೂಡಲೇ ನೆರವಾಗುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.