ಬೆಂಗಳೂರು:‘ ಉರಿಗೌಡ– ನಂಜೇಗೌಡ’ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದ ತೋಟಗಾರಿಕಾ ಸಚಿವರೂ ಆಗಿರುವ ನಿರ್ಮಾಪಕ ಮುನಿರತ್ನ ಅವರನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಸೋಮವಾರ ಮಾತುಕತೆಗೆ ಕರೆದಿದ್ದಾರೆ.
ಉರಿಗೌಡ ಮತ್ತು ನಂಜೇಗೌಡ ವಿಚಾರ ರಾಜಕೀಯವಾಗಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಮುನಿರತ್ನ ಅವರು ಈ ಹೆಸರನ್ನು ನೋಂದಣಿ ಮಾಡಿಸಿ, ಚಲನಚಿತ್ರ ಮಾಡುವುದಾಗಿ ಘೋಷಿಸಿ, ಮುಹೂರ್ತದ ದಿನಾಂಕವನ್ನೂ ನಿಗದಿ ಮಾಡಿದ್ದರು. ಮುನಿರತ್ನ ಅವರ ನಡೆಯನ್ನು ಜೆಡಿಎಸ್ನ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಆಕ್ಷೇಪಿಸಿದ್ದರು.
ಈ ಮಧ್ಯೆ ಸ್ವಾಮೀಜಿಯವರು ಮುನಿರತ್ನ ಅವರನ್ನು ಸಿನಿಮಾದ ವಿಚಾರವಾಗಿ ಮಾತನಾಡಲು ಕರೆದಿದ್ದಾರೆ. ಸಿನಿಮಾ ನಿರ್ಮಾಣ ಕೈಬಿಡಲು ಸೂಚಿಸಬಹುದು ಎಂದು ಮೂಲಗಳು ಹೇಳಿವೆ.
ಈ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಮುನಿರತ್ನ ಅವರು, ‘ಸ್ವಾಮೀಜಿ ಕರೆದಿದ್ದಾರೆ. ನಾಳೆ ಬೆಳಿಗ್ಗೆ ಅವರನ್ನು ಭೇಟಿ ಮಾಡುತ್ತೇನೆ. ಅವರ ಜತೆ ಮಾತುಕತೆ ಆಗುವವರೆಗೆ ಈ ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡುವುದಿಲ್ಲ’ ಎಂದೂ ಹೇಳಿದ್ದಾರೆ.
ಚಿತ್ರಕಥೆ ನನ್ನದಲ್ಲ: ಅಶ್ವತ್ಥನಾರಾಯಣ
‘ಸಹೋದ್ಯೋಗಿ ಮುನಿರತ್ನ ನಿರ್ಮಿಸುತ್ತಿರುವ ಉರಿಗೌಡ– ನಂಜೇಗೌಡ ಸಿನಿಮಾದಲ್ಲಿ ನನ್ನ ಪಾತ್ರವೇನೂ ಇಲ್ಲ. ಅದಕ್ಕೆ ನಾನು ಚಿತ್ರಕತೆಯನ್ನೇನೂ ಬರೆಯುತ್ತಿಲ್ಲ’ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಟಿಪ್ಪುವನ್ನು ಕೊಂದ ವೀರಸೇನಾನಿಗಳಾದ ಉರಿಗೌಡ ಮತ್ತು ನಂಜೇಗೌಡರ ಬಗ್ಗೆ ನನಗೆ ನೈಜ ಅಭಿಮಾನವಿದೆ. ಅವರ ಬಗ್ಗೆ ನಾನು ಇದುವರೆಗೂ ಆಡಿರುವ ಮಾತುಗಳಿಗೆ ನಾನು ಬದ್ಧನಾಗಿದ್ದೇನೆ. ಆದರೆ ಸಿನಿಮಾದ ಭಾಗವಾಗುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.