ADVERTISEMENT

ಉರ್ದು ಪರಕೀಯ ಭಾಷೆಯಲ್ಲ: ಸುಧೀಂದ್ರ ಕುಲಕರ್ಣಿ

ಪರ್ಷಿಯನ್, ಅರೇಬಿಕ್, ದಖನಿ ಉರ್ದು ಗ್ರಂಥಗಳ ಕನ್ನಡ ಅನುವಾದಿತ 19 ಸಂಪುಟಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 5:55 IST
Last Updated 19 ಡಿಸೆಂಬರ್ 2022, 5:55 IST
ಬೆಂಗಳೂರಿನಲ್ಲಿ ಭಾನುವಾರ 19 ಸಂಪುಟಗಳನ್ನು ಸುಧೀಂದ್ರ ಕುಲಕರ್ಣಿ ಅವರು ಬಿಡುಗಡೆ ಮಾಡಿದರು. ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಕಮ್ಯುನಿಕೇಷನ್‌ನ ಟ್ರಸ್ಟಿ ಮನ್ಸೂರ್ ಅಲಿ ಖಾನ್, ಪತ್ರಕರ್ತ ದೇವು ಪತ್ತಾರ, ಶಾಸಕ ರಿಜ್ವಾನ್ ಅರ್ಷದ್, ಎಂ.ಬಿ.ಪಾಟೀಲ, ಕಾಂಗ್ರೆಸ್ ಮುಖಂಡ ರೆಹಮಾನ್ ಖಾನ್, ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಕೃಷ್ಣ ಕೊಲ್ಹಾರ ಕುಲಕರ್ಣಿ ಇದ್ದರು –ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಭಾನುವಾರ 19 ಸಂಪುಟಗಳನ್ನು ಸುಧೀಂದ್ರ ಕುಲಕರ್ಣಿ ಅವರು ಬಿಡುಗಡೆ ಮಾಡಿದರು. ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಕಮ್ಯುನಿಕೇಷನ್‌ನ ಟ್ರಸ್ಟಿ ಮನ್ಸೂರ್ ಅಲಿ ಖಾನ್, ಪತ್ರಕರ್ತ ದೇವು ಪತ್ತಾರ, ಶಾಸಕ ರಿಜ್ವಾನ್ ಅರ್ಷದ್, ಎಂ.ಬಿ.ಪಾಟೀಲ, ಕಾಂಗ್ರೆಸ್ ಮುಖಂಡ ರೆಹಮಾನ್ ಖಾನ್, ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಕೃಷ್ಣ ಕೊಲ್ಹಾರ ಕುಲಕರ್ಣಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಉರ್ದು ಕೂಡ ನಮ್ಮ ಭಾಷೆ, ಭಾರತದಲ್ಲೇ ಹುಟ್ಟಿದ ಭಾಷೆ. ಆದರೆ, ಅದನ್ನು ಈಗ ಪರಕೀಯ ಭಾಷೆ ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದು ಲೇಖಕ ಸುಧೀಂದ್ರ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ಹಾಗೂ ಬೆಂಗಳೂರಿನ ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಕಮ್ಯುನಿಕೇಷನ್ ಜಂಟಿಯಾಗಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಅನುವಾದಗೊಂಡಿರುವ ಆದಿಲ್‌ ಶಾಹಿ ಕಾಲದ ಪರ್ಷಿಯನ್, ಅರೇಬಿಕ್, ದಖನಿ ಉರ್ದು ಗ್ರಂಥಗಳ 19 ಸಂಪುಟಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಪರ್ಷಿಯನ್, ಅರೇಬಿಕ್, ಉರ್ದು ಭಾಷೆಗಳು ನಮ್ಮದಲ್ಲ ಎಂಬ ಮಾನಸಿಕತೆ ಬೆಳೆಸಲಾಗುತ್ತಿದೆ. ವಾಸ್ತವದಲ್ಲಿ ಕಲಬುರ್ಗಿ, ವಿಜಯಪುರ, ಉತ್ತರ ಕರ್ನಾಟಕದ ಹಲವು ಜಿಲ್ಲೆ ಮತ್ತು ಅನೇಕ ರಾಜ್ಯಗಳಲ್ಲಿಇಂಗ್ಲಿಷ್‌ಗಿಂತ ಮುಂಚೆ ಪರ್ಷಿಯನ್ ಶತಮಾನಗಳ ಕಾಲ ಅಧಿಕೃತ ಭಾಷೆಯಾಗಿತ್ತು. ಈಗ ಪರ್ಷಿಯನ್ ಭಾಷೆ ಅಧ್ಯಯನ ಕೇಂದ್ರಗಳೇ ಇಲ್ಲದಿರುವುದು ವಿಪರ್ಯಾಸ’ ಎಂದರು.

ADVERTISEMENT

‘ಗೋಲಗುಮ್ಮಟ ಸೇರಿ ‌ಮುಸ್ಲಿಂ ಹೆಸರಿನಲ್ಲಿ ಇರುವ ಎಲ್ಲವೂ ನಮ್ಮದಲ್ಲ. ತಾಜ್‌ ಮಹಲ್ ಇದ್ದರೆ ಅದನ್ನು ಹಿಂದೂಗಳೇ ನಿರ್ಮಾಣ ಮಾಡಿದ್ದಾರೆ. ಟಿಪ್ಪು ಸುಲ್ತಾನ್ ದೇಶಭಕ್ತನಲ್ಲ ಎಂದು ಪ್ರತಿಪಾದಿಸಲಾಗುತ್ತಿದೆ. ಈ ರೀತಿ ಸಮಾಜ ಮತ್ತು ದೇಶವನ್ನು ಒಡೆಯುವ ರಾಜಕಾರಣ ಅತ್ಯಂತ ದುರಾದೃಷ್ಟಕರ’ ಎಂದು ಹೇಳಿದರು.

‘ಬಹುಭಾಷೆ, ಬಹು ಸಂಸ್ಕೃತಿಗಳ ದೇಶ ನಮ್ಮದು. ಸಂವಿಧಾನ ಕೂಡ ಎಲ್ಲರಿಗೂ ಸಮಾನ ಅವಕಾಶಗಳನ್ನು ಕೊಟ್ಟಿದೆ. ಆದಿಲ್‌ ಶಾಹಿ ಇತಿಹಾಸವನ್ನು ಕನ್ನಡಿಗರ ಮುಂದೆ 19 ಸಂಪುಟಗಳಲ್ಲಿ ತಂದಿರುವುದು ಅತ್ಯಂತ ಮಹತ್ವದ ಕೆಲಸ. ಎಂ.ಎಂ.ಕಲಬುರ್ಗಿ ಮತ್ತು ಕೃಷ್ಣ ಕೋಲ್ಹಾರ ಕುಲಕರ್ಣಿ ಅವರ ಈ ಕಾರ್ಯ ಎಲ್ಲರೂ ಮೆಚ್ಚುವಂತದ್ದು’ ಎಂದು ಬಣ್ಣಿಸಿದರು.

ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಮಾತನಾಡಿ, ‘ಫ.ಗು. ಹಳಕಟ್ಟಿ ಅವರು ಇಲ್ಲದಿದ್ದರೆ ವಚನ ಸಾಹಿತ್ಯವೇ ಇರುತ್ತಿರಲಿಲ್ಲ. ಶರಣರ ಮತ್ತು ವಚನಕಾರರ ಕೃತಿಗಳನ್ನು ಸಂಗ್ರಹಿಸಿ ಫ.ಗು.ಹಳಕಟ್ಟಿ ಅವರು ತಮ್ಮ ಸ್ವಂತ ಹಣದಿಂದ ಪ್ರಕಟಿಸಿದರು’ ಎಂದು ಹೇಳಿದರು.

‘ಆದಿಲ್‌ ಶಾಹಿಗಳು ಸೌಹಾರ್ದದ ಆಡಳಿತ ನಡೆಸಿದವರು. ಸರಸ್ವತಿಯನ್ನು ಜ್ಞಾನದೇವತೆ ಎಂದು ಪೂಜೆ ಮಾಡುತ್ತಿದ್ದರು. ಇತಿಹಾಸವನ್ನು ತಿಳಿದುಕೊಂಡು ಮುನ್ನಡೆಯುವ ಅಗತ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.