ADVERTISEMENT

ರಾಯಚೂರು ಆಡಳಿತದಲ್ಲಿ ಅರಾಜಕತೆ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 12:06 IST
Last Updated 6 ನವೆಂಬರ್ 2019, 12:06 IST
ಸಿ.ಟಿ. ರವಿ
ಸಿ.ಟಿ. ರವಿ   

ರಾಯಚೂರು: ‘ಜಿಲ್ಲೆಯ ಪ‍್ರಗತಿ ಪರಿಶೀಲನೆ ಸಮಾಧಾನ ತಂದಿಲ್ಲ. 2011ರಿಂದ ಕಾಮಗಾರಿಗಳು ಬಾಕಿ ಇವೆ. ಕೊಟ್ಟಿರುವ ಅನುದಾನ ಸದುಪಯೋಗವಾಗಿಲ್ಲ. ಎಷ್ಟೋ ಇಲಾಖೆಗಳ ಅಧಿಕಾರಿಗಳಲ್ಲಿ ಮಾಹಿತಿಯೇ ಇಲ್ಲ. ಅರಾಜಕತೆ ಇರುವಲ್ಲಿ ಮಾತ್ರ ಇಂತಹ ಸ್ಥಿತಿ ಇರುತ್ತದೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಸಮಾಧಾನ ಹೊರಹಾಕಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಈ ಬಗ್ಗೆ ಗಂಭೀರವಾಗಿ ಅವಲೋಕಿಸಿ, ಪರಿಶೀಲಿಸುವುದಕ್ಕೆ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ. ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಸದ್ಭಳಕೆಯಾಗುವ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲೂ ಗಮನಹರಿಸಬೇಕು ಎಂಬುದು ಮನದಟ್ಟಾಗಿದೆ. ಇದಕ್ಕಾಗಿ ರಾಜ್ಯಮಟ್ಟದಲ್ಲಿ ಪರಿಶೀಲನಾ ತಂಡವೊಂದನ್ನು ರಚಿಸಲಾಗುವುದು’ ಎಂದರು.

ADVERTISEMENT

ಜಿಲ್ಲಾಮಟ್ಟದಲ್ಲಿ ಟಾಸ್ಕ್‌ಫೋರ್ಸ್‌:‘ಸಮಗ್ರ ಪ್ರವಾಸೋದ್ಯಮ ನೀತಿ ರೂಪಿಸುವುದಕ್ಕೆ ಅಗತ್ಯ ಸಲಹೆ ನೀಡಲು ರಾಜ್ಯಮಟ್ಟದಲ್ಲಿ ಡಾ.ಸುಧಾಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್‌ ಇದೆ. ಜಿಲ್ಲಾಮಟ್ಟದಿಂದಲೂ ಸಲಹೆಗಳನ್ನು ಪಡೆಯಲು ಜಿಲ್ಲಾಮಟ್ಟದ ಟಾಸ್ಕ್‌ ಫೋರ್ಸ್‌ ರಚಿಸಲು ಸೂಚಿಸಲಾಗಿದೆ’ ಎಂದರು.

‘ರಾಜ್ಯದ 25 ಜಿಲ್ಲೆಗಳಿಗೆ ಭೇಟಿ ನೀಡಿ ಪ್ರವಾಸಿ ತಾಣಗಳ ಸ್ಥಿತಿಯನ್ನು ಅವಲೋಕಿಸಲಾಗಿದೆ. ನವೆಂಬರ್‌ 11 ರೊಳಗೆ ಜಿಲ್ಲೆಗಳ ಭೇಟಿ ಪೂರ್ಣಗೊಳಿಸಿ, ಟಾಸ್ಕ್‌ಫೋರ್ಸ್‌ ಸಮಿತಿ ಸಭೆ ಕರೆಯಲಾಗುವುದು. ಒಟ್ಟಾರೆ ಡಿಸೆಂಬರ್‌ 20 ರೊಳಗಾಗಿ ಪ್ರವಾಸೋದ್ಯಮ ನೀತಿ ರೂಪಿಸುವುದಕ್ಕೆ ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಜಯಂತಿ ಆಚರಿಸಬೇಕೆ?

ರಾಜ್ಯದಲ್ಲಿ ವಿವಿಧ ಜಯಂತಿಗಳನ್ನು ಆಚರಿಸಬೇಕೆ? ಆಚರಿಸಿದರೆ, ಅದರ ಸ್ವರೂಪ ಹೇಗಿರಬೇಕು? ನಿಮ್ಮ ಅನುಭವ ಏನು? ಜಯಂತಿಗಳು ಜಾತಿ ಕೇಂದ್ರಿತವಾಗಿದೆಯೇ ಅಥವಾ ಮಹಾತ್ಮರ ವಿಚಾರ ಪ್ರಧಾನವಾಗಿದೆಯೋ? ಎನ್ನುವ ಪ್ರಶ್ನೆಗಳಿಗೆ ಜಿಲ್ಲೆಯ ಶಾಸಕರು ಹಾಗೂ ಪತ್ರಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ ಕಳುಹಿಸುವಂತೆ ಜಿಲ್ಲಾಡಳಿತಕ್ಕೆ ಸಚಿವ ಸಿ.ಟಿ. ರವಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.