ADVERTISEMENT

ಜೈಲಿನಿಂದ ಬಿಡುಗಡೆ: ವಿನಯಗೆ ಸನ್ಮಾನ, ಸ್ವಾಮೀಜಿಗಳ ಆಶೀರ್ವಾದ

ಅಂತರ ಮರೆತು ಜಮಾಯಿಸಿದ್ದ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 20:13 IST
Last Updated 21 ಆಗಸ್ಟ್ 2021, 20:13 IST
ಬೆಳಗಾವಿಯ ಕೇಂದ್ರ ಕಾರಾಗೃಹದಿಂದ ಜಾಮೀನಿನ ಮೇಲೆ ಶನಿವಾರ ಬಿಡುಗಡೆಯಾದ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಅವರನ್ನು ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಡಾ.ಅಲ್ಲಮಪ್ರಭು ಸ್ವಾಮೀಜಿ ನಾಗನೂರು ರುದ್ರಾಕ್ಷಿಮಠದಲ್ಲಿ ಸನ್ಮಾನಿಸಿದರು. ಮುಖಂಡ ಪ್ರಕಾಶ ಹುಕ್ಕೇರಿ ಇದ್ದಾರೆ
ಬೆಳಗಾವಿಯ ಕೇಂದ್ರ ಕಾರಾಗೃಹದಿಂದ ಜಾಮೀನಿನ ಮೇಲೆ ಶನಿವಾರ ಬಿಡುಗಡೆಯಾದ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಅವರನ್ನು ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಡಾ.ಅಲ್ಲಮಪ್ರಭು ಸ್ವಾಮೀಜಿ ನಾಗನೂರು ರುದ್ರಾಕ್ಷಿಮಠದಲ್ಲಿ ಸನ್ಮಾನಿಸಿದರು. ಮುಖಂಡ ಪ್ರಕಾಶ ಹುಕ್ಕೇರಿ ಇದ್ದಾರೆ   

ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿ ಇಲ್ಲಿನ ಕೇಂದ್ರ ಕಾರಾಗೃಹದಿಂದ ಜಾಮೀನಿನ ಮೇಲೆ ಶನಿವಾರ ಬಿಡುಗಡೆಯಾದ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ, ನೇರವಾಗಿ ಕೆಲ ಸ್ವಾಮೀಜಿಗಳ ಬಳಿ ತೆರಳಿ ಆಶೀರ್ವಾದ ಪಡೆದರು. ಶ್ರೀಗಳು ಹೂಮಾಲೆ ಹಾಕಿ, ಶಾಲು ಹೊದಿಸಿ, ಪುಸ್ತಕ ನೀಡಿ ಸನ್ಮಾನಿಸಿದರು.

ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠಕ್ಕೆ ಬೆಂಬಲಿಗರೊಂದಿಗೆ ಬಂದು ಅಲ್ಲಿನ ಪೀಠಾಧಿಪತಿ ಡಾ.ಅಲ್ಲಮಪ್ರಭು ಸ್ವಾಮೀಜಿ ಮತ್ತು ಧಾರವಾಡದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಬಳಿಕ ಹಲಗಾ ಗ್ರಾಮದಲ್ಲಿರುವ ಸಿದ್ಧಸೇನಾ ಮುನಿ ಅವರಿಂದಲೂ ವಿನಯ ಆಶೀರ್ವಾದ ಪಡೆದುಕೊಂಡರು.

ಕಾರಾಗೃಹದಿಂದ ಹಿಂಡಲಗಾ ಗಣಪತಿ ದೇಗುಲದವರೆಗೆ ಭಾರಿ ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು, ವಿಶೇಷ ಪೂಜೆ ಸಲ್ಲಿಸಿದರು. ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ವಿನಯ ಕುಲಕರ್ಣಿ ಮೀಸೆ ತಿರುವಿದಾಗ ಬೆಂಬಲಿಗರಿಂದ ಜೈಕಾರ ಮೊಳಗಿತು.

ADVERTISEMENT

‘ಜಾಮೀನು ನೀಡಿದ ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.ನ್ಯಾಯಾಂಗದ ಮೇಲೆ ಭರವಸೆ ಇದೆ. ಪ್ರಕರಣದಿಂದ ದೋಷಮುಕ್ತನಾಗಿ ಹೊರಬರುತ್ತೇನೆ’ ಎಂದುವಿನಯ ಮಾಧ್ಯಮದವರ ಮುಂದೆ ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ, ವಿನಯ ಅವರನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ರಾಖಿ ಕಟ್ಟಿ, ತಿಲಕವಿಟ್ಟು ಬರಮಾಡಿಕೊಂಡರು.

ದೂರು ದಾಖಲು: ನೂರಾರು ಮಂದಿ ಬೆಂಬಲಿಗರು ಜಮಾಯಿಸಿ ಪುಷ್ಪವೃಷ್ಟಿ ಮಾಡಿ, ಹೂ ಸೇಬುಗಳ ಹಾರಹಾಕಿ ಸ್ವಾಗತಿಸಿದರು.

ಪಟಾಕಿಗಳನ್ನು ಸಿಡಿಸಿ, ಫೇಡೆ ಹಂಚಿ ಸಂಭ್ರಮಿಸಿದರು. ಬಹುತೇಕರು ಮಾಸ್ಕ್‌ ಧರಿಸಿರಲಿಲ್ಲ ಮತ್ತು ಅಂತರ ಕಾಯ್ದುಕೊಂಡಿರಲಿಲ್ಲ.

ವಾರಾಂತ್ಯ ಕರ್ಫ್ಯೂ ಮತ್ತು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಿನಯ ಹಾಗೂ 300 ಮಂದಿ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

2020ರ ನ.9ರಿಂದ ಕಾರಾಗೃಹದಲ್ಲಿದ್ದ ಅವರಿಗೆ ಆ.11ರಂದು ಸುಪ್ರೀಂ ಕೋರ್ಟ್‌ ಹಾಗೂ ಆ.19ರಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.