ಬೆಂಗಳೂರು: ರಾಜ್ಯದ ಕಾಲೇಜುಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕಗಳ ಸಂಖ್ಯೆಯನ್ನು ಹೆಚ್ಚಿಸಿ, ಆ ಮೂಲಕ ಸ್ವಯಂಸೇವಕರ ಸಂಖ್ಯೆಯನ್ನು 10 ಲಕ್ಷಕ್ಕೆ ಏರಿಸುವ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಚರ್ಚೆ ನಡೆಸಿದರು.
ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಎನ್ಎಸ್ಎಸ್ ಸಂಯೋಜಕರ ಜೊತೆ ಇಬ್ಬರೂ ಸಚಿವರು ವಿಡಿಯೊ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಸಚಿವರಿಬ್ಬರು ಎನ್ಎಸ್ಎಸ್ ಸ್ವಯಂಸೇವಕರ ಸಂಖ್ಯೆಯನ್ನು 10 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.
‘ರಾಷ್ಟ್ರೀಯ ಸೇವಾ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ರಾಜ್ಯದಲ್ಲಿ 2,78,200 ಸ್ವಯಂಸೇವಕರನ್ನು ನೋಂದಣಿ ಮಾಡಿಸುವ ಗುರಿ ನೀಡಲಾಗಿತ್ತು. ಅದನ್ನು ಮೀರಿ ಈಗಾಗಲೇ 5 ಲಕ್ಷ ನೋಂದಾಯಿತ ಸ್ವಯಂಸೇವಕರಿದ್ದಾರೆ. ಹೊಸ ಶಿಕ್ಷಣ ನೀತಿಯಲ್ಲಿ ಎನ್ಎಸ್ಎಸ್ ಪಠ್ಯದ ಭಾಗ. ಹೀಗಾಗಿ, ಪ್ರತಿಯೊಂದು ಕಾಲೇಜೂ ಇದಕ್ಕೆ ಒಳಪಡುತ್ತದೆ’ ಎಂದು ಸಚಿವ ಅಶ್ವತ್ಥನಾರಾಯಣ ವಿವರಿಸಿದರು.
‘ಎನ್ಎಸ್ಎಸ್ ಸ್ವಯಂಸೇವಕರು ಶ್ರಮದಾನದ ಜೊತೆಗೆ ಆರೋಗ್ಯ ಅರಿವು, ಸರ್ಕಾರದ ಹಲವು ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಸ್ವಯಂಸೇವಕರ ಸಂಖ್ಯೆ ಹೆಚ್ಚಿಸುವುದರಿಂದ ಹೆಚ್ಚಿನ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲುಸಹಕಾರಿಯಾಗಲಿದೆ’ ಎಂದು ನಾರಾಯಣಗೌಡ ತಿಳಿಸಿದರು..
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.