ADVERTISEMENT

ಸಲಿಂಗ ವಿವಾಹದ ವಿರುದ್ಧ ಹೇಳಿಕೆ: ಕ್ಷಮೆ ಯಾಚನೆಗೆ ಒತ್ತಾಯ

ಸುಶೀಲ್‌ಕುಮಾರ್ ಮೋದಿಗೆ ಅಕೈ ಪದ್ಮಶಾಲಿ ಬಹಿರಂಗ ಪತ್ರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 23:15 IST
Last Updated 25 ಡಿಸೆಂಬರ್ 2022, 23:15 IST
ಅಕೈ ಪದ್ಮಶಾಲಿ
ಅಕೈ ಪದ್ಮಶಾಲಿ   

ಬೆಂಗಳೂರು: ‘ಸಲಿಂಗ ವಿವಾಹದ ಭಾರತೀಯ ಸಂಸ್ಕೃತಿಗೆ ವಿರುದ್ಧ ಎಂದು ಸಂಸತ್‌ನಲ್ಲಿ ಹೇಳಿಕೆ ನೀಡಿರುವ ರಾಜ್ಯಸಭೆ ಸದಸ್ಯ ಸುಶೀಲ್‌ಕುಮಾರ್ ಮೋದಿ ಅವರು ಕೂಡಲೇ ಕ್ಷಮೆ ಯಾಚಿಸಬೇಕು’ ಎಂದು ತೃತೀಯ ಲಿಂಗಗಳ ಪರ ಹೋರಾಟಗಾರ್ತಿ ಅಕೈ ಪದ್ಮಶಾಲಿ ಆಗ್ರಹಿಸಿದ್ದಾರೆ.

ಸುಶೀಲ್‌ಕುಮಾರ್ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು, ‘ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವುದರ ವಿರುದ್ಧ ನೀವು ರಾಜ್ಯಸಭೆಯಲ್ಲಿ ಆಡಿರುವ ಮಾತುಗಳಿಂದ ತೀವ್ರ ಆಘಾತವಾಗಿದೆ’ ಎಂದಿದ್ದಾರೆ.

‘ಮದುವೆ ಎಂಬುದು ಪುರುಷ ಮತ್ತು ಮಹಿಳೆಗಷ್ಟೇ ಸೀಮಿತ, ಅದೇ ಪರಿಶುದ್ಧ ಎಂಬ ನಿಮ್ಮ ಭಾವನೆಯು ತೃತೀಯ ಲಿಂಗಿಗಳ ಭಾವನೆಗಳಿಗೆ ವಿರುದ್ಧವಾಗಿದೆ. ಎಲ್ಲಾ ಲೈಂಗಿಕ ಅಲ್ಪಸಂಖ್ಯಾತರನ್ನೂ ಸಮಾನವಾಗಿ ನೋಡಬೇಕಿದೆ. ಪುರುಷನಾಗಿ ಹುಟ್ಟಿದ ನಾನು, ಈಗ ಮಹಿಳೆಯಾಗಿ ಪರಿವರ್ತನೆಯಾಗಿದ್ದೇನೆ. ನಿಮ್ಮ ಪ್ರಕಾರ ನಾನು ಮಹಿಳೆಯಲ್ಲ ಮತ್ತು ನಾನು ಮದುವೆಯಾಗುವಂತೆಯೇ ಇಲ್ಲ. ನಾನು ಮದುವೆಯಾಗುವ ಹಕ್ಕನ್ನು ನಿರಾಕರಿಸುವುದು ಸರಿಯಲ್ಲ. ಸಲಿಂಗ ವಿವಾಹ ವಿರೋಧಿಸುವುದು ಸಮಾನತೆ ಮತ್ತು ಗೌರವಯುತ ಜೀವನದ ಹಕ್ಕನ್ನು ನಿರಾಕರಿಸಿದಂತೆ’ ಎಂದು ತಮ್ಮ ಮೂರು ಪುಟಗಳ ಪತ್ರದಲ್ಲಿ ಹೇಳಿದ್ದಾರೆ.

ADVERTISEMENT

‘ಪುರುಷರೂ ಅಲ್ಲದ, ಮಹಿಳೆಯೂ ಅಲ್ಲದ ನನ್ನಂತ ಅನೇಕರು ಇದ್ದಾರೆ. ಅವರು ಮದುವೆಯೇ ಆಗಬಾರದೆ? ನಮ್ಮ ವಿವಾಹ ನಿರಾಕರಿಸುವುದು ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿದಂತೆ ಅಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘ಸಲಿಂಗ ವಿವಾಹ ದೇಶದ ಸಂಸ್ಕೃತಿಗೆ ಧಕ್ಕೆಯಾಗಲಿದೆ ಎಂದು ಹೇಳಿದ್ದೀರಿ. ಭಾರತೀಯ ಶ್ರೀಮಂತ ಸಂಸ್ಕೃತಿಯು ವಿಭಿನ್ನ ವಿವಾಹ ಮತ್ತು ಪ್ರೀತಿಗೆ ಸದಾ ಅವಕಾಶಗಳನ್ನು ನೀಡಿದೆ. ಸಂಸತ್‌ನಲ್ಲಿ ನೀವು ನೀಡಿರುವ ಹೇಳಿಕೆಯು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ನೋವುಂಟು ಮಾಡಿದ್ದು, ಕೂಡಲೇ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.