ADVERTISEMENT

ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಹೆಸರಲ್ಲಿ ಕಲಾವಿದರಿಂದ ಹಣ ಸಂಗ್ರಹ: ಆರೋಪ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 12:49 IST
Last Updated 8 ಮಾರ್ಚ್ 2023, 12:49 IST
   

ನವದೆಹಲಿ: ‘ದೆಹಲಿ ಕರ್ನಾಟಕ ಸಂಘದ ಅಮೃತಮಹೋತ್ಸವದ ಹೆಸರಿನಲ್ಲಿ ಕಲಾವಿದರಿಂದ ಹಣ ಸಂಗ್ರಹಿಸಿರುವುದು ಕಾನೂನುಬಾಹಿರ. ಈ ಕುರಿತು ಸೂಕ್ತ ತನಿಖೆ ಆಗಬೇಕು’ ಎಂದು ದೆಹಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರಿ ಆಗ್ರಹಿಸಿದ್ದಾರೆ.

‘ಅಮೃತ ಮಹೋತ್ಸವಕ್ಕೆ ಕರ್ನಾಟಕದಿಂದ ಸಾವಿರಕ್ಕೂ ಅಧಿಕ ಕಲಾವಿದರನ್ನು ಕರೆಸಲಾಗಿತ್ತು. ಎಲ್ಲರಿಂದಲೂ ಹಣ ಸಂಗ್ರಹಿಸಿರುವ ಅನುಮಾನ ಇದೆ. ಅಮೃತ ಮಹೋತ್ಸವದ ಕುರಿತು ಕೂಡಲೇ ವಿಶೇಷ ಮಹಾಸಭೆ ಕರೆಯಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗಲಿಲ್ಲ. ಪ್ರಶ್ನೆ ಕೇಳಿದ ಬಹುತೇಕರೊಂದಿಗೆ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜ ಗೌರವಪೂರ್ವಕವಾಗಿ ನಡೆದುಕೊಂಡಿಲ್ಲ. ಸಂಘದ ಸದಸ್ಯ ಹರಿ ಎಂಬುವರು ಕಾನೂನಾತ್ಮಕ ಪ್ರಶ್ನೆ ಕೇಳಿದರು. ನಿಮ್ಮನ್ನು ಹೊರಕ್ಕೆ ಹಾಕಬೇಕಾಗುತ್ತದೆ ಎಂದು ಸಂಘದ ಅಧ್ಯಕ್ಷರು ಬೆದರಿಸಿರುವುದು ಖಂಡನೀಯ. ಮಹಿಳೆಯರ ಪ್ರಶ್ನೆಗಳಿಗೆ ಸಹ ಉತ್ತರ ನೀಡದೆ ಸಭೆಯನ್ನು ಮೊಟಕುಗೊಳಿಸಿದರು. ಅಧ್ಯಕ್ಷರು ಕಾವಲು ಸಮಿತಿಯ ವರದಿಯನ್ನು ನೀಡದೆ ಸಹ ತಪ್ಪನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಸದಸ್ಯರ ಆರೋಪಗಳಿಗೆ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜ ಪ್ರತಿಕ್ರಿಯಿಸಿ, ‘ಸಂಘದ ಅಮೃತ ಮಹೋತ್ಸವಕ್ಕೆ ಕಲಾವಿದರಿಂದ ನಾವು ಹಣ ಸಂಗ್ರಹಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.