ADVERTISEMENT

‘ಆ್ಯಂಬಿಡೆಂಟ್‌: ಎಸಿಪಿ ಸಾಕ್ಷಿದಾರರಾಗಲಿ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 20:49 IST
Last Updated 20 ಡಿಸೆಂಬರ್ 2018, 20:49 IST

ಬೆಂಗಳೂರು: ‘ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನು ಪ್ರಕರಣದ ಪ್ರಮುಖ ಸಾಕ್ಷಿದಾರರನ್ನಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿ ಲಂಚಮುಕ್ತ ಕರ್ನಾಟಕ ವೇದಿಕೆಯ ರವಿಕೃಷ್ಣಾರೆಡ್ಡಿ ಸಿಸಿಬಿಗೆ ಪತ್ರ ಬರೆದಿದ್ದಾರೆ.

ಗುರುವಾರ ಮಧ್ಯಾಹ್ನ ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ ಕುಮಾರ್ ಹಾಗೂ ಡಿಸಿಪಿ ಎಸ್.ಗಿರೀಶ್ ಅವರನ್ನು ಭೇಟಿಯಾಗಿ ಆ ಪತ್ರ ಸಲ್ಲಿಸಿದ್ದಾರೆ.

ಪತ್ರದಲ್ಲೇನಿದೆ: ‘ಆ್ಯಂಬಿಡೆಂಟ್ ಕಂಪನಿಯಿಂದ ಹಣ ಪಡೆದವರಲ್ಲಿ ಹಾಲಿ/ಮಾಜಿ ಸಚಿವರು, ಶಾಸಕರು, ಹಿರಿಯ ಪೊಲೀಸ್ ಅಧಿಕಾರಿಗಳೂ ಇದ್ದಾರೆ ಎಂದು ಆರೋಪಿ ಫರೀದ್ ಹೇಳಿದ್ದಾನೆ. ಇದೆಲ್ಲದರ ಬಗ್ಗೆ ಪೂರ್ಣ ಮಾಹಿತಿ ತಮಗೆ ಗೊತ್ತಿರುವುದಾಗಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರು ಇತ್ತೀಚೆಗೆ ಡಿಜಿಪಿಗೆ ಬರೆದಿದ್ದ ಪತ್ರದಲ್ಲಿ ಹೇಳಿದ್ದಾರೆ. ಆದರೆ, ಸಿಸಿಬಿಯವರು ಈವರೆಗೂ ಯಾವೊಬ್ಬ ಅಧಿಕಾರಿಯನ್ನೂ, ಶಾಸಕರನ್ನು ಕರೆಸಿ ವಿಚಾರಣೆ ನಡೆಸಿಲ್ಲ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.

ADVERTISEMENT

‘ಒಂದು ವೇಳೆ ವೆಂಕಟೇಶ್ ಪ್ರಸನ್ನ, ಡಿಜಿಪಿಗೆ ಬರೆದಿರುವ ಪತ್ರದಲ್ಲಿನ ಸಂಗತಿಗಳು ಸುಳ್ಳಾಗಿದ್ದರೆ, ಇಲಾಖೆ ಹಾಗೂ ರಾಜಕಾರಣಿಗಳ ಮೇಲೆ ಅನುಮಾನ ಬರುವಂತೆ ನಡೆದುಕೊಂಡಿರುವ ಅವರ ವಿರುದ್ಧವೂ ಕ್ರಮ ಕೈಗೊಳ್ಳಬಹುದಾಗಿದೆ. ಈ ಕಾರಣಗಳಿಂದ ಅವರನ್ನು ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಿ’ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.