ADVERTISEMENT

ಮಂಡ್ಯ: ಸಿದ್ದರಾಮಯ್ಯ ಜನ್ಮದಿನಕ್ಕೆ ತೆರಳಿದ್ದ ವೃದ್ಧ ಶವವಾಗಿ ಪತ್ತೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 13:35 IST
Last Updated 9 ಆಗಸ್ಟ್ 2022, 13:35 IST
ಸ್ವಾಮಿಗೌಡ
ಸ್ವಾಮಿಗೌಡ   

ಮಂಡ್ಯ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜನ್ಮದಿನ ಸಮಾರಂಭದಲ್ಲಿ ಪಾಲ್ಗೊಳ್ಳಲು ದಾವಣಗೆರೆಗೆ ತೆರಳಿದ್ದ ಪಾಂಡವಪುರ ತಾಲ್ಲೂಕು ಅರಳಕುಪ್ಪೆ ಗ್ರಾಮದ ವೃದ್ಧ ಸ್ವಾಮಿಗೌಡ (73) ಹರಿಹರ ಬೈಪಾಸ್‌ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಆ.3ರಂದು ಜನ್ಮದಿನ ಮುಗಿಸಿ ಪಾಂಡವಪುರಕ್ಕೆ ವಾಪಸ್‌ ಬರುವ ವೇಳೆ ಸ್ವಾಮಿಗೌಡ ಬಸ್‌ ತಪ್ಪಿಸಿಕೊಂಡಿದ್ದಾರೆ. ಹೆದ್ದಾರಿ ಬದಿಯಲ್ಲಿ ಬಸ್‌ಗಾಗಿ ಹುಡುಕಾಡುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಒಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಹಿಟ್‌ ಅಂಡ್‌ ರನ್‌ ಪ್ರಕರಣ ದಾಖಲಾಗಿತ್ತು.

ಈ ನಡುವೆ ಸ್ವಾಮಿಗೌಡ ನಾಪತ್ತೆಯಾಗಿರುವ ಸಂಬಂಧ ಅವರ ಕುಟುಂಬ ಸದಸ್ಯರು ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಸಿದ್ದರಾಮಯ್ಯ ಜನ್ಮದಿನಕ್ಕೆ ತೆರಳಿದ್ದ ಮಾಹಿತಿಯನ್ನೂ ಪೊಲೀಸರಿಗೆ ನೀಡಿದ್ದರು. ಹರಿಹರ ಪೊಲೀಸರು ಕಳುಹಿಸಿದ್ದ ಭಾವಚಿತ್ರವನ್ನು ಸ್ವಾಮಿಗೌಡರ ಕುಟುಂಬ ಸದಸ್ಯರು ಗುರುತಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೊಂದು ಮೃತದೇಹದ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ನಮ್ಮ ತಂದೆ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದರು. ಅವರ ಜನ್ಮದಿನ ಸಮಾರಂಭಕ್ಕೆ ತೆರಳುವುದಾಗಿ ತಿಳಿಸಿದ್ದರು. ಹರಿಹರ ಬಳಿ ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿ ಸೋಮವಾರ ರಾತ್ರಿ ತಿಳಿಯಿತು. ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರಿಸಿದ್ದಾರೆ’ ಎಂದು ಸ್ವಾಮಿಗೌಡ ಪುತ್ರ ಮಂಜುನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.