ADVERTISEMENT

ಹಲೋ... ಏನ್‌ ರಾಜೀನಾಮೆ ಕೊಡ್ತಿದೀರಾ?

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 7:55 IST
Last Updated 1 ಜುಲೈ 2019, 7:55 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಹಲೋ... ಏನ್ರಿ...ರಾಜೀನಾಮೆ ಕೊಡ್ತೀರಾ?’

ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಫೋನ್‌ ಕರೆ ಮಾಡಿದ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರು ಕೇಳಿದ ಪ್ರಶ್ನೆ ಇದು. ಇದಕ್ಕೆ ಉತ್ತರಿಸಿದ ಕುಮಠಳ್ಳಿ ‘ರಾಜೀನಾಮೆ ನೀಡುವುದಿಲ್ಲ. ನಾನೆಲ್ಲೂ ಹೋಗಿಲ್ಲ. ಬೆಂಗಳೂರಿನಲ್ಲಿ ಇದ್ದೇನೆ’ ಎಂದರು.

ನೋಡಿ, ‘ನಿಮ್ಮ ಏಳು ಜನರ ಪಟ್ಟಿಯಲ್ಲಿ ಒಬ್ಬ ಶಾಸಕರು ಕಮ್ಮಿಯಾದರು’ ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಾಸ್ಯ ಚಟಾಕಿ ಸಿಡಿಸಿದ ಸತೀಶ ‘ಆಪರೇಷನ್‌ ಕಮಲ ಮಾಡಿದ್ರೆ ನಾವು ರಿವರ್ಸ್‌ ಆಪರೇಷನ್‌ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಇದಕ್ಕೂ ಮೊದಲು ಶಾಸಕ ಆನಂದ್‌ ಸಿಂಗ್‌ ರಾಜೀನಾಮೆ ಕುರಿತು ಮಾತನಾಡಿದ ಸತೀಶ ಜಾರಕಿಹೊಳಿ,‘ಶಾಸಕ ಸ್ಥಾನಕ್ಕೆ ಆನಂದ ಸಿಂಗ್‌ ರಾಜೀನಾಮೆ ನೀಡಿರುವುದರಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ’ ಎಂದು ಹೇಳಿದರು.

‘ಅತೃಪ್ತರ ಗುಂಪಿಗೂ ಆನಂದ ಸಿಂಗ್‌ ಅವರಿಗೂ ಯಾವುದೇ ಸಂಬಂಧ ಇಲ್ಲ. ಅವರು ಜಿಂದಾಲ್‌ ವಿಷಯದಲ್ಲಿ ರಾಜೀನಾಮೆ ನೀಡಿರಬಹುದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ನೀಡಿರುವ ರಾಜೀನಾಮೆ ವಾಪಸ್‌ ಪಡೆಯಲೂ ಬರುತ್ತದೆ. ಇದರ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಯಾರೇ ರಾಜೀನಾಮೆ ಕೊಟ್ಟರೂ ಸರ್ಕಾರದ ಮೇಲೆ ಏನೂ ಪರಿಣಾಮ ಉಂಟಾಗಲ್ಲ’ ಎಂದರು.

‘ಹಿಂದೆ ಕೂಡ ಹತ್ತು ಜನರು ಮುಂಬೈಗೆ ಹೋಗಿ ಬಂದರೂ ಸರ್ಕಾರಕ್ಕೆ ಏನೂ ಮಾಡಲು ಆಗಲಿಲ್ಲ’ ಎಂದು ಟಾಂಗ್‌ ನೀಡಿದರು.

‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಅಮೆರಿಕ ಪ್ರವಾಸವು ಪೂರ್ವನಿಯೋಜಿತ ಕಾರ್ಯಕ್ರಮವಾಗಿದೆ. ರಾಜೀನಾಮೆಗೂ ಪ್ರವಾಸಕ್ಕೂ ಯಾವುದೇ ಸಂಬಂಧ ಇಲ್ಲ. ಅಥಣಿ ಶಾಸಕ ಮಹೇಶ ಕುಮಠಳ್ಳಿ ಸೇರಿದಂತೆ ಬೇರಾರೂ ರಾಜೀನಾಮೆ ನೀಡುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.