ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಂಟು ಮಂದಿಯನ್ನು ತಮ್ಮ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಲು ಆದೇಶಿಸಿದೆ.
ಅಷ್ಟೂ ಜನರಿಗೆ ಸಂಪುಟ ದರ್ಜೆಯ ಸ್ಥಾನ ನೀಡಿ ನೇಮಕ ಮಾಡಿರುವುದು ಸಂವಿಧಾನದ 164 1(ಎ) ಉಲ್ಲಂಘನೆ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯ ಅರ್ಜಿ ಸಲ್ಲಿಸಿದೆ.
ಮಹದೇವ ಪ್ರಕಾಶ್, ಮೋಹನ್ ಲಿಂಬಿಕಾಯಿ, ಜಿ.ಎಸ್. ಸುನೀಲ್, ಶಂಕರಗೌಡ ಪಾಟೀಲ, ಎಂ.ಪಿ. ರೇಣುಕಾಚಾರ್ಯ, ಬೇಳೂರು ಸುದರ್ಶನ್, ಎಂ.ಬಿ. ಮರಂಕಲ್ ಮತ್ತು ಲಕ್ಷ್ಮೀನಾರಾಯಣ ಅವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗಿತ್ತು. ಇವರಲ್ಲಿ ಮೂವರು ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಸಂವಿಧಾನದ ಪ್ರಕಾರ ಶಾಸನ ಸಭೆಯ ಸದಸ್ಯರ ಸಂಖ್ಯೆಯಲ್ಲಿ ಸಂಪುಟ ದರ್ಜೆ ಸಚಿವರ ಸಂಖ್ಯೆ ಶೇ 15ಕ್ಕಿಂತ ಹೆಚ್ಚಿಗೆ ಇರುವಂತಿಲ್ಲ. ಅದರ ಪ್ರಕಾರ 34 ಜನರಿಗೆ ಮಾತ್ರ ಸಚಿವ ಸ್ಥಾನ ನೀಡಬಹುದು. ಸಲಹೆಗಾರರನ್ನು ನೇಮಿಸಿಕೊಂಡು ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವ ಮೂಲಕ ಸಂವಿಧಾನ ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.