ADVERTISEMENT

ಭ್ರಷ್ಟಾಚಾರ ಮಾಡದ ಕಾಂಗ್ರೆಸಿಗರು ಇದ್ದಾರೆಯೆ? - ಆರ್‌. ಅಶೋಕ ಸವಾಲು

ಕಂದಾಯ ಸಚಿವ ಆರ್‌. ಅಶೋಕ ಸವಾಲು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 16:35 IST
Last Updated 26 ಸೆಪ್ಟೆಂಬರ್ 2022, 16:35 IST
ತುಮಕೂರು ಸಿದ್ಧಗಂಗಾ ಮಠಕ್ಕೆ ಸೋಮವಾರ ಭೇಟಿ ನೀಡಿದ ಕಂದಾಯ ಸಚಿವ ಆರ್.ಅಶೋಕ ಅವರು ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಇತರರು ಇದ್ದಾರೆ
ತುಮಕೂರು ಸಿದ್ಧಗಂಗಾ ಮಠಕ್ಕೆ ಸೋಮವಾರ ಭೇಟಿ ನೀಡಿದ ಕಂದಾಯ ಸಚಿವ ಆರ್.ಅಶೋಕ ಅವರು ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಇತರರು ಇದ್ದಾರೆ   

ತುಮಕೂರು: ಭ್ರಷ್ಟಾಚಾರ ಮಾಡದ ಕಾಂಗ್ರೆಸ್ ನಾಯಕರು ಯಾರಾದರೂ ಇದ್ದರೆ, ಅಂತಹವರು ‘ಪೇಸಿಎಂ’ ಪೋಸ್ಟರ್ ಅಂಟಿಸಿದರೆ ಸೆಲ್ಯೂಟ್ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್. ಅಶೋಕ ಸವಾಲುಹಾಕಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಳಿಯನ್ನು ಈ ನಾಡಿನ ಜನ ನಂಬಲ್ಲ. ಎಷ್ಟೇ ಸುಳ್ಳು ಹೇಳಿದರೂ ಯಾರನ್ನೂ ನಂಬಿಸಲು ಸಾಧ್ಯವಿಲ್ಲ’ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 65 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದವು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಷ್ಟೇ ಜೈಲಿನಿಂದ ಹೊರಗೆ ಬಂದಿದ್ದಾರೆ. ಇಂತಹವರು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಲೋಕಾಯುಕ್ತ, ಎಸಿಬಿಯಲ್ಲಿ ಒಂದೇ ಒಂದು ದೂರು ದಾಖಲಾಗಿದ್ದರೂ ತೋರಿಸಲಿ ಎಂದು
ಹೇಳಿದರು.

ADVERTISEMENT

‘ಭಾರತ್ ಜೋಡೊ’ ಯಾತ್ರೆ ಟೀಕಿಸಿದ ಅವರು, ‘ಅದು ಕಾಂಗ್ರೆಸ್ ಜೋಡೊ ಯಾತ್ರೆ’ಯಾಗಿದೆ. ರಾಜಸ್ಥಾನದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ಈಗ ಅಲ್ಲೂ ಸರ್ಕಾರ ಬೀಳುತ್ತಿದೆ. ಇನ್ನು ಒಂದು ವಾರದಲ್ಲಿ ಕಾಂಗ್ರೆಸ್‌ನವರು ಭಿಕ್ಷಾಪಾತ್ರೆ ಹಿಡಿದು ದೇಶ ಸುತ್ತಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

ಅರವತ್ತೈದು ವರ್ಷಗಳ ಕಾಲ ಕಾಂಗ್ರೆಸಿಗರು ರಾಜ್ಯ ಲೂಟಿ ಮಾಡಿದ್ದು, ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅದ್ಯಾವ ಮುಖ ಇಟ್ಟುಕೊಂಡು ಪೋಸ್ಟರ್ ಅಂಟಿಸುತ್ತಾರೊ ಗೊತ್ತಿಲ್ಲ. ದೆಹಲಿಯಿಂದ ಹಿಡಿದು ರಾಜ್ಯದವರೆಗೆ ಕಾಂಗ್ರೆಸ್ ನಾಯಕರು ಜೈಲು–ಬೇಲಿನಲ್ಲಿ ಇದ್ದಾರೆ ಎಂದು ಟೀಕಿಸಿದರು.

‘ಭಾರತ ಮಾತೆ ಅಪವಿತ್ರ’ ಎಂದು ಹೇಳಿದ ಪಾದ್ರಿ ಜತೆ ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ. ಅವರಿಗೆ ರಾಜ್ಯದ ನೆಲ ತುಳಿಯುವ ನೈತಿಕತೆ ಇಲ್ಲವಾಗಿದೆ. ಯಾತ್ರೆ ಬಿಟ್ಟು ವಾಪಸ್ ಹೋಗಲಿ. ರಾಜ್ಯಕ್ಕೆ ರಾಹುಲ್ ಕಾಲಿಡಬಾರದು ಎಂದು
ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.