ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್
ಬೆಂಗಳೂರು: ರಸ್ತೆ ಗುಂಡಿಗಳ ವಿಷಯವಾಗಿ ಗುತ್ತಿಗೆದಾರರಿಂದ ಕೆಲಸ ಮಾಡಿಸಲು ನೀವು ಅಸಮರ್ಥರೇ? ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಬಿಜೆಪಿ ಕೆಣಕಿದೆ.
ಬಿಜೆಪಿ ಮೇಲೆ ಮಾಡಿರುವ ಆರೋಪಕ್ಕೆ ಕರ್ನಾಟಕ ಬಿಜೆಪಿ ಟ್ವಿಟರ್ನಲ್ಲಿ ತಿರುಗೇಟು ನೀಡಿದೆ.
ಸಿಎಂ ಡಿಸಿಎಂ ಅವರೇ ‘ಕುಣಿಯಲಾರದವನು ನೆಲ ಡೊಂಕು ಎಂದನಂತೆ’, ಹಂಗಾಯ್ತು ನಿಮ್ಮ ಕಥೆ. ನೀವು ಹೇಳಿದಂತೆ, ಹಿಂದಿನ ಸರ್ಕಾರದ ಅವಧಿಯಲ್ಲಿ ₹6000 ಕೋಟಿ ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ಖರ್ಚಾಗಿದೆ ಆದರೆ ಮತ್ತೆ ರಸ್ತೆಯಲ್ಲಿ ಗುಂಡಿಗಳಿವೆ ಎಂದು ಆರೋಪ ಮಾಡುವ ನಿಮಗೆ, ಆ ಎಲ್ಲಾ ರಸ್ತೆಗಳಿಗೂ ಕಡ್ಡಾಯವಾಗಿ ಕನಿಷ್ಠ 1 ರಿಂದ 5 ವರ್ಷಗಳ 'ದೋಷ ಹೊಣೆಗಾರಿಕೆ ಅವಧಿ' (DLP) ಅನ್ವಯವಾಗುತ್ತದೆ ಎಂಬುದು ಗೊತ್ತಿಲ್ಲವೇ? ಎಂದು ಪ್ರಶ್ನಿಸಿದೆ.
ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಲು DLP ನಿಯಮದ ಪ್ರಕಾರ ‘ಸಿಂಗಲ್ ಲೇಯರ್’ ರಸ್ತೆ ದುರಸ್ತಿಗೆ 1 ವರ್ಷ, ‘ಡಬಲ್ ಲೇಯರ್’ ರಸ್ತೆಗೆ 2 ವರ್ಷ ಮತ್ತು ‘ವೈಟ್ ಟಾಪಿಂಗ್’ ರಸ್ತೆಗೆ 5 ವರ್ಷ ಕಾಲಮಿತಿಯಿರುತ್ತದೆ. ನಿರ್ದಿಷ್ಟ ಅವಧಿಯೊಳಗೆ ರಸ್ತೆ ಹಾಳಾಗಿದ್ದರೆ ಗುತ್ತಿಗೆದಾರನಿಂದ ದುರಸ್ತಿ ಮಾಡಿಸಬೇಕು, ಅವರಿಂದ ಕೆಲಸ ಮಾಡಿಸಲು ನೀವು ಅಸಮರ್ಥರೇ? ಎಂದು ಪ್ರಶ್ನಿಸಿದೆ.
ಬಿಜೆಪಿ ಮೇಲೆ ಬೆರಳು ತೋರಿಸುವುದನ್ನು ಬಿಟ್ಟು, ಮೊದಲು ಕಳಪೆ ಕೆಲಸ ಮಾಡಿದ ಗುತ್ತಿಗೆದಾರರ ವಿರುದ್ಧ DLP ನಿಯಮದನ್ವಯ ದುರಸ್ತಿ ಮಾಡದಿದ್ದರೆ ಅವರಮೇಲೆ ಕಾನೂನು ಕ್ರಮ ಕೈಗೊಳ್ಳಿ ಅಥವಾ ಅವರನ್ನು ಕಪ್ಪುಪಟ್ಟಿಗೆ ಸೇರಿಸಿ. ಗುಂಡಿಗಳಿಗೆ ತೇಪೆ ಹಾಕುವ ನಾಟಕ ಬಿಟ್ಟು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ ಎಂದು ತರಾಟೆಗೆ ತೆಗೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.