ADVERTISEMENT

ಏಜೆನ್ಸಿಯಿಂದ ಹಣ ವಸೂಲಿ: ‘ಆರೋಗ್ಯ ಕವಚ’ ಸಿಬ್ಬಂದಿ ಆರೋಪ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 4:05 IST
Last Updated 12 ಜನವರಿ 2022, 4:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಆರೋಗ್ಯ ಕವಚ–108’ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಹೆಚ್ಚಳವಾದ ವಾರ್ಷಿಕ ವೇತನದಿಂದ ಶೇ 10ರಷ್ಟು ಹಣವನ್ನು ಏಜೆನ್ಸಿಯು ವಸೂಲಿ ಮಾಡುತ್ತಿದೆ’ ಎಂದು ರಾಜ್ಯ ಆರೋಗ್ಯ ಕವಚ 108 ನೌಕರರ ಸಂಘ ಆರೋಪಿಸಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್‌.ಶ್ರೀಧರ್,‘ಈ ಯೋಜನೆಯಡಿ ರಾಜ್ಯದಾದ್ಯಂತಸುಮಾರು 3,500ಕ್ಕೂ ಹೆಚ್ಚು ಸಿಬ್ಬಂದಿ ‘ಜಿವಿಕೆಇಎಂಆರ್‌ ಸಂಸ್ಥೆ’ಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಸಿಬ್ಬಂದಿಗೆ ವೇತನ ಹೆಚ್ಚಳವಾಗಿತ್ತು. ಅದರಲ್ಲಿ ಶೇ 10ರಷ್ಟು ಹಣವನ್ನು ಸಿಬ್ಬಂದಿಯಿಂದ ಸಂಗ್ರಹಿಸಲಾಗಿದೆ. ಇದರಲ್ಲಿಸಂಸ್ಥೆಯ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದರು.

‘ಇದನ್ನು ಪ್ರಶ್ನಿಸಿದಾಗ, ಆರೋಗ್ಯ ಇಲಾಖೆಯ ಮೇಲಧಿಕಾರಿಗಳಿಗೆ ಹಣ ತಲುಪಿಸಲಿಕ್ಕಿದೆ ಎಂದು ತಿಳಿ
ಸಿದ್ದರು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇವೆಗಳ ಉಪನಿರ್ದೇಶಕರು (ಇಎಂಆರ್‌ಐ), ‘ಇಲಾಖೆ ಅಧಿಕಾರಿಗಳುಸಿಬ್ಬಂದಿಯಿಂದ ಲಂಚ ಪಡೆದಿಲ್ಲ ಹಾಗೂಯಾವುದೇ ರೀತಿಯಲ್ಲಿ ಹಣ ಸಂಗ್ರಹಿಸುತ್ತಿಲ್ಲ. ಯಾರೂ ಹಣ ನೀಡಬೇಡಿ’ ಎಂದು ಸ್ಪಷ್ಟಪಡಿಸಿದ್ದಾರೆ’ ಎಂದರು.

ADVERTISEMENT

‘ಸಂಸ್ಥೆಯ ಟೆಂಡರ್‌ ಅವಧಿ ಮುಗಿದಿದ್ದರೂ ಮುಂದುವರಿಸಿದ್ದಾರೆ. ಆಂಬುಲೆನ್ಸ್‌ ನಿರ್ವಹಣೆಗೆ ಹಣ ನೀಡುತ್ತಿಲ್ಲ. ಇದರಿಂದ ಆಂಬುಲೆನ್ಸ್‌ಗಳು ಅಲ್ಲಲ್ಲೇ ಕೆಟ್ಟು ನಿಲ್ಲುತ್ತವೆ. ಸಿಬ್ಬಂದಿಗೆ ವೇತನ ಪಾವತಿಯೂ ವಿಳಂಬವಾಗುತ್ತಿದೆ. ಏಜೆನ್ಸಿ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

‘18 ರಾಜ್ಯಗಳಲ್ಲಿಜಿವಿಕೆಇಎಂಆರ್‌ ಅಧೀನದಲ್ಲಿ ಸಾವಿರಾರು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಯಿಂದ ನಾವು ಹಣ ಸಂಗ್ರಹ ಮಾಡಿಲ್ಲ. ಆರೋಪ ಮಾಡುತ್ತಿರುವವರು ಈಗ ನಮ್ಮ ಸಿಬ್ಬಂದಿಯೂ ಅಲ್ಲ. ಜನರನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಆರೋಪಗಳೆಲ್ಲ ಸುಳ್ಳು’ ಎಂದುಜಿವಿಕೆಇಎಂಆರ್‌ ಸಂಸ್ಥೆಯ ರಾಜ್ಯ ಮುಖ್ಯಸ್ಥ ಆರ್‌.ಜೆ.ಹನುಮಂತಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.