ಬೆಂಗಳೂರು: ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ನಡೆಸಿದವರಿಗೆ ಇನ್ಫೊಸಿಸ್ ಪ್ರತಿಷ್ಠಾನವು ‘ಆರೋಹಣ’ ಪ್ರಶಸ್ತಿ ಸ್ಥಾಪಿಸಿರುವುದಾಗಿ ಘೋಷಿಸಿದ್ದು, ಅದಕ್ಕಾಗಿ ₹ 1.5 ಕೋಟಿ ಮೊತ್ತ ಮೀಸಲಿರಿಸಿದೆ.
ಸಾಮಾಜಿಕ ಕ್ಷೇತ್ರದ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವುದು, ಅಂಥವು ಮುನ್ನೆಲೆಗೆ ಬರಲು ವೇದಿಕೆ ಕಲ್ಪಿಸುವುದು ಈ ಪ್ರಶಸ್ತಿಯ ಉದ್ದೇಶ. ಇಂಥ ಆವಿಷ್ಕಾರ ಮಾಡಿ ಸಾಮಾಜಿಕವಾಗಿ ಹಿಂದುಳಿದ ಪ್ರದೇಶ, ಸಮುದಾಯಗಳಿಗೆ ಪರಿಹಾರ ಕಲ್ಪಿಸಿಕೊಟ್ಟ ವ್ಯಕ್ತಿ, ತಂಡ ಅಥವಾ ಸರ್ಕಾರೇತರ ಸಂಘಟನೆಗಳನ್ನು ಈ ಪ್ರಶಸ್ತಿ ಗುರುತಿಸಲಿದೆ.
‘ದೇಶದ ಮೂಲೆ ಮೂಲೆಯಲ್ಲಿರುವ ಜನ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳನ್ನು ಪ್ರತಿಷ್ಠಾನವು ನಿರಂತರವಾಗಿ ಗಮನಿಸುತ್ತಿದೆ. ಅವುಗಳಿಗೆ ಪರಿಹಾರೋಪಾಯ ತೋರುವ, ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕಿಳಿಸುವ ವ್ಯಕ್ತಿಗಳು ಮತ್ತು ಸಂಘಟನೆಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದೇವೆ. ಆ ಮೂಲಕ, ಸಾಮಾಜಿಕ ಬದಲಾವಣೆಯ ಮಟ್ಟವನ್ನು ಅರಿಯುವ ಗುರಿ ಹೊಂದಿದ್ದೇವೆ’ ಎಂದು ಪ್ರತಿಷ್ಠಾನದ ಮುಖ್ಯಸ್ಥರಾದ ಸುಧಾಮೂರ್ತಿ ಹೇಳಿದರು.
ಪ್ರಶಸ್ತಿಯ ವಿಭಾಗಗಳು:1. ಆರೋಗ್ಯ ಸೇವೆ, 2. ಗ್ರಾಮೀಣಾಭಿವೃದ್ಧಿ, 3. ನಿರ್ಗತಿಕರ ಸೇವೆ, 4. ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ, 5. ಶಿಕ್ಷಣ ಮತ್ತು ಕ್ರೀಡೆ, 6. ಸುಸ್ಥಿರತೆ. ಅ.15ರಿಂದ ಡಿ.31ರವರೆಗೆ ಅರ್ಜಿ ಸಲ್ಲಿಸಬಹುದು. 18 ವರ್ಷ ದಾಟಿದ ಯಾವುದೇ ವ್ಯಕ್ತಿ ಅರ್ಜಿ ಸಲ್ಲಿಸಬಹುದು.ತಮ್ಮ ಕಾರ್ಯಗಳ ಮಾಹಿತಿಯನ್ನು ವಿಡಿಯೊ ರೂಪದಲ್ಲಿ ಸಲ್ಲಿಸಬಹುದು. ಅವುಗಳನ್ನು ‘ಆರೋಹಣ್ ಸೋಷಿಯಲ್ ಇನ್ನೋವೇಷನ್ ಅವಾರ್ಡ್ಸ್’ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗೆ ಜಾಲತಾಣ: www.infosys.com/aarohan
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.