ಬೆಂಗಳೂರು: ಅವ್ಯವಹಾರ ನಡೆಸಿದ ಆರೋಪ, ಅತ್ಯಾಚಾರದ ಆಪಾದನೆಗೆ ಗುರಿಯಾಗಿ ಕರ್ನಾಟಕದಲ್ಲಿ ಈ ಹಿಂದೆಯೂ ಅನೇಕ ರಾಜಕೀಯ ನೇತಾರರು ಬಂಧನಕ್ಕೆ ಈಡಾಗಿ, ಜೈಲು ವಾಸ ಅನುಭವಿಸಿದ್ದಾರೆ.
ಮುಖ್ಯಮಂತ್ರಿ ಹುದ್ದೆಯಲ್ಲಿದ್ದವರು, 2008–13ರ ಅವಧಿಯ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದವರು ಸಿಬಿಐ, ಲೋಕಾಯುಕ್ತ ಪೊಲೀಸರು ಹಾಗೂ ಎಸ್ಐಟಿ ತಂಡದಿಂದ ಬಂಧನಕ್ಕೆ ಒಳಗಾಗಿದ್ದರು.
l ಬಿ.ಎಸ್. ಯಡಿಯೂರಪ್ಪ: ಪ್ರೇರಣಾ ಟ್ರಸ್ಟ್ ಪ್ರಕರಣದಲ್ಲಿ ಚೆಕ್ ಮೂಲಕ ಹಣ ಪಡೆದಿದ್ದಾರೆ ಎಂಬ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಜೈಲುವಾಸವನ್ನು ಅವರು ಅನುಭವಿಸಿದ್ದರು. ಈ ಪ್ರಕರಣದಲ್ಲಿ ಅವರು ಖುಲಾಸೆಯಾಗಿದ್ದಾರೆ.
l ಕಟ್ಟಾ ಸುಬ್ರಹ್ಮಣ್ಯನಾಯ್ಡು: ಕೆಐಎಡಿಬಿ ಅಕ್ರಮ ಪ್ರಕರಣದಲ್ಲಿ ಕಟ್ಟಾ ಅವರನ್ನು ಬಂಧಿಸಲಾಗಿತ್ತು. ಅವರು ಜೈಲುವಾಸ ಅನುಭವಿಸಿದ್ದರು.
l ಗಾಲಿ ಜನಾರ್ದನ ರೆಡ್ಡಿ: ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಪ್ರಕರಣದಲ್ಲಿ ಸಿಬಿಐ ರೆಡ್ಡಿ ಅವರನ್ನು ಬಂಧಿಸಿತ್ತು. ಒಂದೂವರೆ ವರ್ಷಕ್ಕೂ ಹೆಚ್ಚುಕಾಲ ಆಂಧ್ರ, ಕರ್ನಾಟಕದಲ್ಲಿ ಅವರು ಜೈಲುವಾಸ ಅನುಭವಿಸಿದ್ದರು.
l ಆನಂದ್ ಸಿಂಗ್: ಅಕ್ರಮ ಗಣಿಗಾರಿಕೆ ಹಾಗೂ ಅದಿರು ಸಾಗಣೆ ಪ್ರಕರಣದಲ್ಲಿ ಸಿಂಗ್ ಅವರನ್ನು ಎಸ್ಐಟಿ ಬಂಧಿಸಿತ್ತು.
l ಕೃಷ್ಣಯ್ಯ ಶೆಟ್ಟಿ: ಕೆಐಎಡಿಬಿ ಅಕ್ರಮ ಪ್ರಕರಣದಲ್ಲಿ ಕೃಷ್ಣಯ್ಯ ಶೆಟ್ಟಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಇವರು ಜೈಲುವಾಸ ಅನುಭವಿಸಿದ್ದರು.
l ಹರತಾಳು ಹಾಲಪ್ಪ: ಸಚಿವರಾಗಿದ್ದ ಅವಧಿಯಲ್ಲೇ ಅತ್ಯಾಚಾರದ ಆರೋಪವನ್ನು ಹಾಲಪ್ಪ ಎದುರಿಸಿ, ಸಚಿವ ಸ್ಥಾನ ತ್ಯಾಗ ಮಾಡಿದ್ದರು. ಈ ಪ್ರಕರಣದ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು. ಈಗ ಅವರು ಆರೋಪ ಮುಕ್ತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.