ADVERTISEMENT

ಸೈನ್ಸ್‌ ವಿದ್ಯಾರ್ಥಿಗಳಿಗೆ ಆರ್ಟ್ಸ್‌ ಲೆಕ್ಚರ್‌ ಪಾಠ!

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2018, 19:30 IST
Last Updated 2 ಆಗಸ್ಟ್ 2018, 19:30 IST
   

ಬೆಂಗಳೂರು: ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಿಕ್ಷಕರು ವಿಜ್ಞಾನ, ಕನ್ನಡ, ಸಮಾಜ ಪಾಠ ಮಾಡುವುದನ್ನು ನೋಡಿದ್ದೇವೆ. ಒಂದು ವಿಷಯದಲ್ಲಿ ಪರಿಣತರಾಗಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳು ಐಚ್ಛಿಕವಾಗಿ ವಿಷಯ ಆಯ್ಕೆ ಮಾಡಿ ಕೊಂಡು ಓದುವ ಪದವಿ ಕಾಲೇಜು ಗಳಲ್ಲೂ ಇಂತಹ ಪರಿಪಾಠ ಇದೆಯಂತೆ!

ಇಂತಹ ಪದ್ಧತಿ ಇದೆ ಎಂದವರು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ.

ವಿಧಾನಸೌಧದಲ್ಲಿ ಗುರುವಾರ ನಡೆದ ಕುಲಪತಿ, ಕುಲಸಚಿವರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಾ ವಿಭಾಗದ ಉಪನ್ಯಾಸಕರು ವಿಜ್ಞಾನ, ಕಾಮರ್ಸ್ ನವರು ಕಲಾ ವಿಭಾಗದಲ್ಲಿ ಪಾಠ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ. ಹಿಂದೆ ಆಗಿದ್ದು ಆಗಿ ಹೋಗಿದೆ. ಅದನ್ನು ಸರಿ‍ಪಡಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ನೀಡಬಾರದು ಎಂದು ನಿರ್ದೇಶನ ನೀಡಿದ್ದೇನೆ’ ಎಂದರು.

ADVERTISEMENT

ರಾಜ್ಯದ ವಿಶ್ವವಿದ್ಯಾಲಯ, ಸರ್ಕಾರಿ ಕಾಲೇಜುಗಳ ಸಿಬ್ಬಂದಿ ಕೊರತೆ ಹಾಗೂ ಮೂಲಸೌಕರ್ಯ ಸಮಸ್ಯೆ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಎಲ್ಲಾ ವಿಶ್ವವಿದ್ಯಾಲಯಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

‘ಕುಲಪತಿಗಳಿಂದ ಉಪನ್ಯಾಸಕರವರೆಗೆ ಬೋಧನೆ, ಸಂಶೋಧನೆ, ತರಬೇತಿ ವಿಸ್ತಾರಗೊಳಿಸುವ ಬಗ್ಗೆ ಮಾಹಿತಿ ಪಡೆದಿದ್ದೇನೆ’ ಎಂದರು.

ವಿವಿಗಳಲ್ಲಿ ಎಷ್ಟು ವಿದ್ಯಾರ್ಥಿಗಳು ಪದವಿಗಳನ್ನು ಪಡೆಯುತ್ತಿದ್ದಾರೆ, ಎಷ್ಟು ಪ್ರಮಾಣದಲ್ಲಿ ಉದ್ಯೋಗ ಸಿಗುತ್ತಿದೆ, ಉದ್ಯೋಗ ಕೇಂದ್ರ ಇದೆಯೇ, ಕಾಲೇಜುಗಳಲ್ಲಿ ಪ್ರಯೋಗಾಲಯ ಇದೆಯೇ ಎಂದು ಕೇಳಲಾಗಿದೆ. ಈ ಸಂಬಂಧ ವರದಿ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.

ಕಾಲೇಜುಗಳಲ್ಲಿ ಯೋಗ ಕಡ್ಡಾಯ

ಕೆಲವು ಕಾಲೇಜುಗಳಲ್ಲಿ ಯೋಗ ಕಲಿಸಲಾಗುತ್ತಿದೆ. ಎಲ್ಲ ಕಾಲೇಜುಗಳಲ್ಲೂ ಯೋಗ ಕಡ್ಡಾಯ ಮಾಡಲು ಸೂಚಿಸಲಾಗಿದೆ ಎಂದು ದೇವೇಗೌಡ ಹೇಳಿದರು.

ಬೆಂಗಳೂರು, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಗಳ ನಡುವಿನ ಗೊಂದಲ ಪರಿಹರಿಸಿಕೊಳ್ಳಲು ಮೂರು ದಿನಗಳೊಳಗೆ ಮೂವರು ಕುಲಪತಿಗಳ ಸಭೆ ನಡೆಸಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.