ADVERTISEMENT

ಅಶೋಕ, ಬಿವೈವಿ ಮುಖಕ್ಕೆ ಮಂಗಳಾರತಿ: ಬೈರತಿ ಸುರೇಶ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 20:20 IST
Last Updated 21 ಜುಲೈ 2025, 20:20 IST
ಬೈರತಿ ಸುರೇಶ
ಬೈರತಿ ಸುರೇಶ   

ಬೆಂಗಳೂರು: ‘ಸುಳ್ಳು ಆರೋಪಗಳನ್ನು ಮಾಡಿ ಮುಖ್ಯಮಂತ್ರಿಯವರ ವೈಯಕ್ತಿಕ ತೇಜೋವಧೆ ಮಾಡಲು ಬಿಜೆಪಿ, ಜೆಡಿಎಸ್ ನಾಯಕರು ಷಡ್ಯಂತ್ರ ರೂಪಿಸಿದ್ದರು. ಆ ಮೂಲಕ, ಅವರ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದ್ದರು. ಅವರ ಪೊಳ್ಳು ಆರೋಪಗಳಿಗೆ ತಕ್ಕ ಶಾಸ್ತಿಯಾಗಿದೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಪ್ರತಿಕ್ರಿಯಿಸಿದರು.

‘ಕಪಟ ನಾಟಕದ ಪಾದಯಾತ್ರೆ ಮಾಡಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ’ ಎಂದೂ ಅವರು ಆಗ್ರಹಿಸಿದರು.

‘ವಿರೋಧ ಪಕ್ಷಗಳು ಎಷ್ಟೇ ಟೀಕೆ, ಆರೋಪಗಳನ್ನು ಮಾಡಿದರೂ, ದೇಶದ ನ್ಯಾಯಾಂಗ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟವರು ನಾವು. ಆ ನಂಬಿಕೆ ನ್ಯಾಯಪರ ಆದೇಶ ಬರುವಂತೆ ಮಾಡಿದೆ. ಈ ಪ್ರಕರಣದಲ್ಲಿ ಇ.ಡಿಯನ್ನು ದುರುದ್ದೇಶದಿಂದ ಬಳಕೆ ಮಾಡಿಕೊಳ್ಳಲಾಗಿದೆ. ಇದೇ ಕಾರಣದಿಂದ ನಮ್ಮದೇನೂ ತಪ್ಪಿಲ್ಲ ಎಂಬುದನ್ನು ಅರಿತಿದ್ದ ಕರ್ನಾಟಕ ಹೈಕೋರ್ಟ್ ಈ ಹಿಂದೆ ಇ.ಡಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.