ADVERTISEMENT

‘ಹೃದಯ ಕಿತ್ತು ಬರುತ್ತಿದೆ’; ರಮೇಶ್‌ ಕುಮಾರ್ ಬೇಸರ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 20:45 IST
Last Updated 14 ಫೆಬ್ರುವರಿ 2019, 20:45 IST
   

ಬೆಂಗಳೂರು: ಈ ಸಾಲಿನ ವಿಧಾನಸಭೆಯ ಕಲಾಪವನ್ನು ನೆನಪಿಸಿಕೊಂಡಾಗ ಹೃದಯ ಕಿತ್ತು ಬರುತ್ತಿದೆ. ನಾವು ಯಾವುದೇ ಸಣ್ಣ ವಸ್ತು ಖರೀದಿ ಮಾಡುವುದಿದ್ದರೂ 10 ಅಂಗಡಿಗಳಲ್ಲಿ ವಿಚಾರಿಸುತ್ತೇವೆ. ಸಾವಿರಾರು ಕೋಟಿ ಮೊತ್ತದ ಜನರ ತೆರಿಗೆ ಹಣ ಖರ್ಚು ಮಾಡುವ ಬಜೆಟ್‌ಗೆ ಯಾವುದೇ ಚರ್ಚೆ ನಡೆಸದೆ ಅಂಗೀಕಾರ ನೀಡಿದ್ದೇವೆ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಬೇಸರ ವ್ಯಕ್ತಪಡಿಸಿದರು.

ವಿಧಾನಸಭೆಯ ಕಲಾಪವನ್ನು ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡುವ ಮೊದಲು ಮಾತನಾಡಿದ ಅವರು, ‘ನಾನು ಇದನ್ನು ಬಯಸಿರಲಿಲ್ಲ. ಇದು ಖುಷಿ ಪಡುವ ಸಂಗತಿ ಅಲ್ಲ. ಇದು ನಮ್ಮ ಸ್ವಂತ ಹಣ ಅಲ್ಲ. ಮುಂದೆಂದೂ ಈ ರೀತಿ ಆಗಬಾರದು’ ಎಂದು ಮನವಿ ಮಾಡಿದರು.

ಧರಣಿ ನಡೆಸುತ್ತಿದ್ದ ಬಿಜೆಪಿ ಸದಸ್ಯರನ್ನು ಸ್ವಲ್ಪ ಹೊತ್ತು ಸುಮ್ಮನಿರುವಂತೆ ಮನವಿ ಮಾಡಿದರು. ಆಗ ಬಿಜೆಪಿ ಶಾಸಕ ಎಂ.‍ಪಿ.ರೇಣುಕಾಚಾರ್ಯ, ‘ಚರ್ಚೆ ನಡೆಯದೆ ಇರುವುದಕ್ಕೆ ಮೈತ್ರಿ ಸರ್ಕಾರವೇ ಕಾರಣ’ ಎಂದು ಕಿಡಿಕಾರಿದರು. ಆಗ ರಮೇಶ್ ಕುಮಾರ್, ‘ನಾನು ಇಲ್ಲಿ ಪಕ್ಷಾತೀತವಾಗಿ ಮಾತನಾಡುತ್ತಿದ್ದೇನೆ.
ಇದಕ್ಕೆ ಎಲ್ಲರೂ ಕಾರಣ’ ಎಂದು ಪ್ರತಿಪಾದಿಸಿದರು. ರೇಣುಕಾಚಾರ್ಯ ಘೋಷಣೆ ಕೂಗುವುದನ್ನು ಮುಂದುವರಿಸಿದರು. ಇದರಿಂದ ಕುಪಿತಗೊಂಡ ಸಭಾಧ್ಯಕ್ಷರು, ‘ಇವರಿಗೆ ಮ್ಯಾನರ್ಸ್‌ ಇಲ್ಲ. ಎಂತೆಂತಹ ವ್ಯಕ್ತಿಗಳನ್ನು ಶಾಸಕರಾಗಿ ಆಯ್ಕೆ ಮಾಡಿ ಕಳುಹಿಸುತ್ತಿದ್ದಾರೆ’ ಎಂದು ಹೇಳಿ ಮಾತು ಮೊಟಕುಗೊಳಿಸಿದರು. ‘ಇದು ರೈತ ವಿರೋಧಿ ಸರ್ಕಾರ. ಒಂದು ರಾಜ್ಯ, ಮೂವರು ಮುಖ್ಯಮಂತ್ರಿಗಳು’ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು.

ADVERTISEMENT

‘ಏಳು ದಿನಗಳ ಕಲಾಪದಲ್ಲಿ 15 ಗಂಟೆ 10 ನಿಮಿಷ ಕಾರ್ಯಕಲಾಪ ನಡೆದಿದೆ’ ಎಂದು ರಮೇಶ್‌ ಕುಮಾರ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.