ಬೆಳಗಾವಿ: ಮಸೂದೆಯಲ್ಲಿದ್ದ ಅಂಶಗಳ ಬಗ್ಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ’ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಹಾಗೂ ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮೀಸಲಾತಿ–ತಿದ್ದುಪಡಿ) ಮಸೂದೆ–2018 ಅನ್ನು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ತಡೆ ಹಿಡಿದರು.
’ಮಸೂದೆಯಲ್ಲಿದ್ದ ಅಂಶಕ್ಕೂ ಸಚಿವರು ಮಂಡಿಸಿದ ವಿಷಯಕ್ಕೂ ತಾಳೆ ಆಗುತ್ತಿಲ್ಲ. ಹೀಗಾಗಿ, ಮಸೂದೆ ಕುರಿತು ಅಧಿಕಾರಿಗಳ ಜತೆಗೆ ಸಮಾಲೋಚಿಸಿಕೊಂಡು ಬನ್ನಿ. ಮಂಗಳವಾರ ಚರ್ಚೆ ಮಾಡೋಣ‘ ಎಂದು ರಮೇಶ್ ಕುಮಾರ್ ಹೇಳಿದರು.
ಪ್ರಿಯಾಂಕ್ ಖರ್ಗೆ, ’ವಿಶ್ವವಿದ್ಯಾಲಯಗಳಲ್ಲಿ ಸಂಶೋಧಕರ ಹಾಗೂ ವಿಜ್ಞಾನಿಗಳ ನೇಮಕ ಸಂಬಂಧ ಈ ಮಸೂದೆ ಮಂಡಿಸಲಾಗುತ್ತಿದೆ. 45 ದಿನಗಳಿಗಿಂತ ಹೆಚ್ಚು ಕೆಲಸ ಮಾಡಿದವರ ನೇಮಕಕ್ಕೆ ಅನುವು ಮಾಡಿಕೊಡಲಾಗುತ್ತಿದೆ‘ ಎಂದರು.
ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ’45 ದಿನಗಳಿಗಿಂತ ಕಡಿಮೆ ಕೆಲಸ ಮಾಡಿದವರ ನೇಮಕಕ್ಕೂ ಅವಕಾಶ ಇದೆ ಎಂಬ ಅಂಶ ಮಸೂದೆಯಲ್ಲಿದೆ. ಸಚಿವರ ಹೇಳಿಕೆಗೂ ಇಲ್ಲಿರುವ ಅಂಶಗಳಿಗೂ ತಾಳೆ ಆಗುತ್ತಿಲ್ಲ‘ ಎಂದು ಆಕ್ಷೇಪಿಸಿದರು. ಖರ್ಗೆ ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ರಮೇಶ್ ಕುಮಾರ್ ಅವರಿಗೂ ಇದು ಸಮಾಧಾನವಾಗಲಿಲ್ಲ.
ಕರ್ನಾಟಕ ಸಿವಿಲ್ ಸೇವೆಗಳ (ನೇಮಕಾತಿ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಾರ್ಯವಿಧಾನ( ಮಸೂದೆ–2018 ಮಸೂದೆಯನ್ನು ಮಂಡಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.