ADVERTISEMENT

ಹಾಲು ದರ ₹5 ಹೆಚ್ಚಳಕ್ಕೆ ಪ್ರಯತ್ನ: ಸಹಕಾರ ಸಚಿವ ಕೆ.ಎನ್.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 6:05 IST
Last Updated 14 ಸೆಪ್ಟೆಂಬರ್ 2024, 6:05 IST
ಸಚಿವ ಕೆ.ಎನ್.ರಾಜಣ್ಣ
ಸಚಿವ ಕೆ.ಎನ್.ರಾಜಣ್ಣ   

ತುಮಕೂರು: ನಂದಿನಿ ಹಾಲಿನ ಮಾರಾಟ ದರವನ್ನು ಲೀಟರ್‌ಗೆ ₹5 ಹೆಚ್ಚಳ ಮಾಡುವ ಪ್ರಸ್ತಾಪವಿದ್ದು, ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಇಲ್ಲಿ ಶನಿವಾರ ತಿಳಿಸಿದರು.

ಹಾಲಿನ ದರ ಹೆಚ್ಚಳ ಮಾಡಿದ ಸಂಪೂರ್ಣ ಹಣವನ್ನು ರೈತರಿಗೆ ವರ್ಗಾಯಿಸಲಾಗುವುದು. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಚರ್ಚಿಸಿದ್ದು, ಬೆಲೆ ಹೆಚ್ಚಳ ಮಾಡಲು ಸಮ್ಮತಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ದೇಶದ ಯಾವುದೇ ರಾಜ್ಯದಲ್ಲೂ ಇಷ್ಟೊಂದು ಕಡಿಮೆ ಬೆಲೆ (ಲೀಡರ್‌ಗೆ ₹31) ಹಾಲು ಖರೀದಿಸುತ್ತಿಲ್ಲ. ಇಷ್ಟು ಕಡಿಮೆ ದರಕ್ಕೆ ಯಾವ ರಾಜ್ಯದಲ್ಲೂ ಗ್ರಾಹಕರಿಗೆ ಮಾರಾಟ ಮಾಡುತ್ತಿಲ್ಲ. ನಮ್ಮ ರಾಜ್ಯದಲ್ಲೇ ಅತಿ ಕಡಿಮೆ ಕಡಿಮೆ ಬೆಲೆಗೆ ಹಾಲು ಖರೀದಿಸಲಾಗುತ್ತಿದೆ. ರೈತರಿಗೆ ನೆರವಾಗುವ ದೃಷ್ಟಿಯಿಂದ ಹಾಲು ಖರೀದಿ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಒಂದು ಲೀಟರ್ ಬಾಟಲಿ ನೀರಿನ ಬೆಲೆಗೆ ಸರಿಸಮನಾಗಿ ಹಾಲಿಗೆ ಬೆಲೆ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

ADVERTISEMENT

ಹಾಲು ದರ ಹೆಚ್ಚಳ ಮಾಡುವುದರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯಲ್ಲೂ ಲಾಭವಾಗುವುದಿಲ್ಲ. ಸಹಕಾರಿ ಸಂಸ್ಥೆಗಳಲ್ಲಿ ವಹಿವಾಟು ಹೆಚ್ಚಾದರೆ ಆದಾಯ ತೆರಿಗೆ ಪಾವತಿಸಲಾಗುತ್ತದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.