ಬೆಂಗಳೂರು: ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬಾಬು ಅಲಿಯಾಸ್ ಬೊಮ್ಮನಹಳ್ಳಿ ಬಾಬುನನ್ನು ತಾವರಕೆರೆ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕಂಪನಿಯ ಕಚೇರಿ ಮೇಲೆ ದಾಳಿ ನಡೆಸಿದ್ದ ಇನ್ಸ್ಪೆಕ್ಟರ್ ನೇತೃತ್ವದ ತಂಡ, ಬಾಬುನನ್ನು ವಶಕ್ಕೆ ಪಡೆಯಿತು. ಅದೇ ವೇಳೆ ಬಾಬು ಸಹಚರರು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಲಘು ಲಾಠಿ ಪ್ರಹಾರ ನಡೆಸಿ ಆರೋಪಿಯನ್ನು ಜೀಪಿಗೆ ಹತ್ತಿಸಿ ಠಾಣೆಗೆ ಕರೆದೊಯ್ಯಲಾಯಿತು.
‘ತಾವರೆಕೆರೆ ಠಾಣೆ ವ್ಯಾಪ್ತಿಯಲ್ಲಿ ದರೋಡೆ ನಡೆದಿತ್ತು. ಆ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿ, ದರೋಡೆ ಮಾಡಿದ ಚಿನ್ನಾಭರಣವನ್ನು ಬಾಬುಗೆ ನೀಡಿರುವುದಾಗಿ ಹೇಳಿದ್ದ. ಆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಬಾಬುಗೆ ನೋಟಿಸ್ ನೀಡಲಾಗಿತ್ತು. ಆತ ವಿಚಾರಣೆ ಬಂದಿರಲಿಲ್ಲ. ಹೀಗಾಗಿ, ನ್ಯಾಯಾಲಯದಿಂದ ಬಾಡಿ ವಾರಂಟ್ ಪಡೆದು ಆತನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.
‘ತನ್ನ ಸಹಚರರ ಮೂಲಕ ಕಳ್ಳತನ ಹಾಗೂ ದರೋಡೆ ಮಾಡಿಸುತ್ತಿರುವ ಬಾಬು, ಅದರಿಂದ ಬಂದ ಚಿನ್ನಾಭರಣವನ್ನು ತಾನೇ ಇಟ್ಟುಕೊಂಡುಅಟ್ಟಿಕಾ ಗೋಲ್ಡ್ ಕಂಪನಿ ಮೂಲಕ ವಹಿವಾಟು ನಡೆಸುತ್ತಿರುವ ಮಾಹಿತಿ ಇದೆ. ಅದನ್ನು ಖಾತ್ರಿಪಡಿಸಿಕೊಳ್ಳಲು ಆತನನ್ನು ವಿಚಾರಣೆಗೆ ಒಳಪಡಿಸಬೇಕಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.