ADVERTISEMENT

ದಾರಿ ತಪ್ಪಿಸುವವರ ವಿರುದ್ಧ ಜಾಗೃತಿ

ಸಾಮಾಜಿಕ ಜಾಲತಾಣ: ಆರ್‌ಎಸ್‌ಎಸ್‌ ಬೈಠಕ್‌ನಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 19:23 IST
Last Updated 2 ಸೆಪ್ಟೆಂಬರ್ 2018, 19:23 IST
ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ಮಂತ್ರಾಲಯದಿಂದ ತೆರಳುವಾಗ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪ್ರಸಾದ ನೀಡಿ ಆಶೀರ್ವದಿಸಿದರು
ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ಮಂತ್ರಾಲಯದಿಂದ ತೆರಳುವಾಗ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪ್ರಸಾದ ನೀಡಿ ಆಶೀರ್ವದಿಸಿದರು   

ರಾಯಚೂರು: ‘ಜಾತಿ, ಧರ್ಮದ ಹೆಸರಿನಲ್ಲಿ ಕೆಲವು ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳ ಮೂಲಕ ದೇಶದಾದ್ಯಂತ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿವಾರ ಸಂಘಟನೆಗಳ ಸಭೆ ಕಳವಳ ವ್ಯಕ್ತಪಡಿಸಿತು. ಹೀಗೆ ದಾರಿ ತಪ್ಪಿಸುವವರ ವಿರುದ್ಧ ಜನಜಾಗೃತಿಗೆ ನಿರ್ಧರಿಸಿತು.

ಮಂತ್ರಾಲಯದಲ್ಲಿ ನಡೆದ ಮೂರು ದಿನಗಳ ಸಭೆಭಾನುವಾರ ಮುಕ್ತಾಯಗೊಂಡಿತು. ಸಭೆಯಲ್ಲಿ ನಡೆದ ಚರ್ಚೆ ಮತ್ತು ನಿರ್ಣಯಗಳನ್ನು ಆರ್‌ಎಸ್‌ಎಸ್‌ ರಾಷ್ಟ್ರೀಯ ಸಹ ಸರಸಂಘಚಾಲಕ ಮನಮೋಹನ್‌ ವೈದ್ಯ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ರಾಜಕೀಯ ಲಾಭಕ್ಕಾಗಿ ಸಮಾಜ ಒಡೆಯುವ ಹುನ್ನಾರ ಸರಿಯಲ್ಲ. ಈ ಬಗ್ಗೆ ಸಮಾಜದ ಜನರು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ದುಷ್ಟಶಕ್ತಿಗಳನ್ನು ಮಟ್ಟಹಾಕುವ ಕೆಲಸಕ್ಕೆ ಎಲ್ಲ ಪರಿವಾರ ಸಂಘಟನೆಗಳು ಸಹಮತ ವ್ಯಕ್ತಪಡಿಸಿವೆ’ ಎಂದರು.

ADVERTISEMENT

‘ಯುವಕರಿಗೆ ಮಾರ್ಗದರ್ಶನದ ಕೊರತೆ ಎದ್ದು ಕಾಣುತ್ತಿದೆ. ಯುವಕರು ದಾರಿ ತಪ್ಪಿ ಸಮಾಜದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗುವುದಕ್ಕೆ ಕಾರಣರಾಗುತ್ತಿದ್ದಾರೆ. ದೇಶದ ಜಲ, ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಬೆಳೆಸಲು ವಿಶೇಷ ಮಹತ್ವ ನೀಡಲಾಗುವುದು’ ಎಂದು ತಿಳಿಸಿದರು.

‘ಆಧುನಿಕ ಜೀವನ ಶೈಲಿಯ ಆಕರ್ಷಣೆ ಹೆಚ್ಚಾಗಿದ್ದರಿಂದದೇಶದ ಕೌಟುಂಬಿಕ ವ್ಯವಸ್ಥೆಗೆ ಧಕ್ಕೆಯಾಗಿದ್ದು, ಕುಟುಂಬಗಳು ಛಿದ್ರವಾಗುತ್ತಿವೆ. ಸಾಮರಸ್ಯ ಉಳಿಸಿಕೊಂಡು, ಕುಟುಂಬ ವ್ಯವಸ್ಥೆ ಕಾಪಾಡಲು ವಿಶೇಷ ಒತ್ತು ನೀಡಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

ಸಂತ್ರಸ್ತರಿಗೆ ಪರಿಹಾರ: ‘ಕೇರಳ ಮತ್ತು ಕೊಡಗಿನಲ್ಲಿ ನೆರೆಹಾವಳಿ ಸಂತ್ರಸ್ತರಿಗೆ ನೆರವಾಗಲು 1.2 ಲಕ್ಷ ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. 650 ವೈದ್ಯರು ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. 300 ಪರಿಹಾರ ಶಿಬಿರ ಸ್ಥಾಪಿಸಲಾಗಿದ್ದು, ಏಳು ಸಾವಿರ ಜನರನ್ನು ರಕ್ಷಿಸಲಾಗಿದೆ. ಸೆ.1ರಿಂದ ನೆರೆ ಪ್ರದೇಶದಲ್ಲಿಯ ಮನೆ, ಜಮೀನು ಮತ್ತು ಧಾರ್ಮಿಕ ಕೇಂದ್ರಗಳ ಸ್ವಚ್ಛತೆ ಆರಂಭಿಸಲಾಗಿದೆ. ಒಟ್ಟು ಎರಡು ಲಕ್ಷ ಜನರು ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.