ADVERTISEMENT

ಆಕ್ಸಿಸ್‌ ಬ್ಯಾಂಕ್‌ ಪ್ರತಿನಿಧಿ– ರೈತರ ಸಭೆ ವಿಫಲ

ಋಣಮುಕ್ತ ಪ್ರಮಾಣ ಪತ್ರಕ್ಕೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 16:35 IST
Last Updated 13 ನವೆಂಬರ್ 2018, 16:35 IST

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಸಾಲವನ್ನು ಒಂದೇ ಬಾರಿಗೆ ಇತ್ಯರ್ಥಪಡಿಸುವ (ಒನ್‌ ಟೈಮ್‌ ಸೆಟ್ಲ್‌ಮೆಂಟ್‌) ಸಂಬಂಧ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿ ನಡೆದ ರೈತರು ಹಾಗೂ ಆಕ್ಸಿಸ್‌ ಬ್ಯಾಂಕ್‌ ಪ್ರತಿನಿಧಿಗಳ ಸಭೆ ವಿಫಲವಾಯಿತು.

ಮುಂದಿನ ಸಭೆಯನ್ನು, ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಅಧ್ಯಕ್ಷತೆಯಲ್ಲಿ ಡಿ.10ರಂದು ನಡೆಸಲು ತೀರ್ಮಾನಿಸಲಾಯಿತು.

ಇದಕ್ಕೂ ಮುಂಚೆ ಸಭೆಯಲ್ಲಿ ಮಾತನಾಡಿದ ಬ್ಯಾಂಕ್‌ ಪ್ರತಿನಿಧಿ ಜಿ. ರಾಜಕುಮಾರ, ‘ಬೈಲಹೊಂಗಲ ವಿಭಾಗದ 65 ರೈತರ ಪೈಕಿ 42 ಜನರು ಮಾತ್ರ ಸಾಲ ಮನ್ನಾ ವ್ಯಾಪ್ತಿಗೆ ಬರುತ್ತಾರೆ. ಇವರ ಸಮಸ್ಯೆ ಇಲ್ಲ. ಇನ್ನುಳಿದ ರೈತರು ಟ್ರಾಕ್ಟರ್‌, ಪೈಪ್‌ಲೈನ್‌ ಅಳವಡಿಕೆಗಾಗಿ ಸಾಲ ಪಡೆದಿದ್ದು, ಅವರಿಗೆ ಮನ್ನಾ ಸೌಲಭ್ಯ ದೊರೆಯುವುದಿಲ್ಲ’ ಎಂದು ಹೇಳಿದರು.

ADVERTISEMENT

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ‘ಯಾವುದೇ ಕಾರಣಕ್ಕೂ ಸಾಲವನ್ನು ಮರುಪಾವತಿಸುವುದಿಲ್ಲ. ನಮಗೆ ಋಣಮುಕ್ತ ಪ್ರಮಾಣ ಪತ್ರ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರಕರಣ ವಾಪಸ್‌:

ಸಾಲ ಮರುಪಾವತಿ ಮಾಡದ ರೈತರ ವಿರುದ್ಧ ಕೋಲ್ಕತ್ತ ನ್ಯಾಯಾಲಯದಲ್ಲಿ ಹೂಡಿರುವ ಪ್ರಕರಣವನ್ನು ವಾಪಸ್‌ ತೆಗೆದುಕೊಳ್ಳುವುದಾಗಿ ಜಿ.ರಾಜಕುಮಾರ ತಿಳಿಸಿದರು.

‘ಕೃಷಿ ಸಾಲ ಹೊರತುಪಡಿಸಿ, ಇತರ ಸಾಲ ಪಡೆದಿರುವ ರೈತರ ಮಾಹಿತಿಯನ್ನು ಕೇಂದ್ರ ಕಚೇರಿಗೆ ತಿಳಿಸುತ್ತೇವೆ. ಅವರ ಸೂಚನೆಯಂತೆ ಮುಂದಿನ ಕ್ರಮಕೈಗೊಳ್ಳುತ್ತೇವೆ‘ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.