ADVERTISEMENT

ಆಯತೊಲ್ಲಾ ಅಲಿ ಖಮೇನಿ ಹತ್ಯೆ: ಸಿಎಂ ಸಿದ್ದರಾಮಯ್ಯ ಖಂಡನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 9:10 IST
Last Updated 1 ಮಾರ್ಚ್ 2026, 9:10 IST
   

ಶಿವಮೊಗ್ಗ: ‘ಒಂದು ಕಡೆ ಶಾಂತಿಮಂತ್ರ ಹೇಳುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಇನ್ನೊಂದು ಕಡೆ ಯುದ್ಧ ಮಾಡುತ್ತಾರೆ. ಈ ರೀತಿಯ ತದ್ವಿರುದ್ಧ ನಿಲುವನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಿಕ್ಕಮಗಳೂರು ಜಿಲ್ಲೆ ತರೀಕೆರೆಗೆ ತೆರಳುವ ಮಾರ್ಗದಲ್ಲಿ ಭಾನುವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್‌ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯಾಗಿದೆ ಎಂಬ ಸಂಗತಿ ಟಿವಿಯಲ್ಲಿ ಬರುತ್ತಿದೆ. ಅದು ಕೂಡ ಖಂಡನೀಯ. ಅವರ ಆತ್ಮಕ್ಕೆ ಚಿರಶಾಂತಿಯ ಕೋರುತ್ತೇನೆ ಎಂದರು.

ದುಬೈನಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಮುಖ್ಯಕಾರ್ಯದರ್ಶಿ ಜೊತೆಗೆ ಮಾತಾಡಿದ್ದೇನೆ. ವಿದೇಶಾಂಗ ಸಚಿವಾಲಯದೊಂದಿಗೆ ಸಂ‍ಪರ್ಕದಲ್ಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ದುಬೈ ವಿಮಾನ ನಿಲ್ದಾಣ ಸದ್ಯಕ್ಕೆ ಮುಚ್ಚಿದೆ. ಅದು ತೆರವು ಆಗುತ್ತಿದ್ದಂತೆಯೇ ಯಾರಿಗೂ ತೊಂದರೆ ಆಗದಂತೆ ಅಲ್ಲಿದ್ದವರನ್ನು ವಾಪಸ್‌ ಕರೆತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಅವರ ಜೊತೆ ಮಾತಾಡಿರುವೆ. ಅವರು ಹೋಟೆಲ್‌ನಲ್ಲಿ ಅರಾಮವಾಗಿ ಇದ್ದಾರಂತೆ. ಭೋಜೇಗೌಡ, ಪುಷ್ಪಾ ಅಮರನಾಥ್‌ ಮಾತ್ರವಲ್ಲ ಅಲ್ಲಿರುವ ಎಲ್ಲ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದರು.

₹15 ಲಕ್ಷ ಪರಿಹಾರ ವಿತರಣೆ:

ಊರಗಡೂರಿನಲ್ಲಿ ಈಚೆಗೆ ಗುಂಪು ಹಲ್ಲೆಯಿಂದ ಹತ್ಯೆಗೀಡಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಂಕೇತ್ ‍ಪೋಷಕರನ್ನು ವಿಮಾನ ನಿಲ್ದಾಣಕ್ಕೆ ಕರೆಸಿಕೊಂಡು ಸಾಂತ್ವನ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರಿಗೆ ರಾಜ್ಯ ಸರ್ಕಾರದಿಂದ ₹10 ಲಕ್ಷ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ‍್ಪ ಅವರು ವೈಯಕ್ತಿಕವಾಗಿ ಕೊಟ್ಟ ₹5 ಲಕ್ಷ ಪರಿಹಾರ ಮೊತ್ತದ ಚೆಕ್‌ ವಿತರಿಸಿದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.