ಬೆಂಗಳೂರು: ‘ಶಾಸಕರ ರಾಜೀನಾಮೆ ಕುರಿತಂತೆ ಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ತೆಗೆದುಕೊಂಡಿರುವ ನಿರ್ಧಾರ ಸಂವಿಧಾನಾತ್ಮಕ. ಇದರಲ್ಲಿ ನ್ಯಾಯಾಲಯಗಳು ಕೂಡ ಮಧ್ಯಪ್ರವೇಶಿಸುವಂತಿಲ್ಲ’ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಚಂದ್ರಶೇಖರ್ ಹೇಳಿದ್ದಾರೆ.
‘ಸಂವಿಧಾನದ ಅನುಚ್ಛೇದ 190 (3)(ಬಿ) ದಲ್ಲಿರುವ ಷರತ್ತಿಗನುಗುಣವಾಗಿ ಸಭಾಧ್ಯಕ್ಷರು ನಡೆದುಕೊಳ್ಳುವುದು ಅನಿವಾರ್ಯ. ಯಾವುದೇ ರಾಜೀನಾಮೆಯ ಸಂದರ್ಭದಲ್ಲಿ ಸಭಾಧ್ಯಕ್ಷರು, ತಮಗೆ ದೊರೆತ ಮಾಹಿತಿಯ ಮೇಲೆ ಮತ್ತು ಸೂಕ್ತವೆಂದು ತೋರುವಂಥ ವಿಚಾರಣೆಯನ್ನು ನಡೆಸಿದ ಬಳಿಕ, ಆ ರಾಜೀನಾಮೆಯನ್ನು ಸ್ವ ಇಚ್ಛೆಯಿಂದ ಕೊಟ್ಟಿಲ್ಲವೆಂದು ಅಥವಾ ಅದು ನೈಜವಾದುದಲ್ಲ ಎಂದು ಮನಗಂಡರೆ, ಅದನ್ನು ಅಂಗೀಕರಿಸುವಂತಿಲ್ಲ ಎಂದು ಸಂವಿಧಾನ ಹೇಳುತ್ತದೆ’ ಎಂದು ಅವರು ತಿಳಿಸಿದ್ದಾರೆ.
‘ಈ ರೀತಿ ನಿರ್ಧಾರ ತೆಗೆದುಕೊಳ್ಳುವುದು ಸಭಾಧ್ಯಕ್ಷರ ವಿಶೇಷಾಧಿಕಾರಕ್ಕೆ ಬದಲಾಗಿ, ಅವರ ಗುರುತರ ಜವಾಬ್ದಾರಿಯಾಗಿದೆ. ಸಭಾಧ್ಯಕ್ಷರು ಆ ಜವಾಬ್ದಾರಿ ನಿಭಾಯಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.