ADVERTISEMENT

ಪರಿಶಿಷ್ಟರ ಅನುದಾನ ಬಳಸುವಲ್ಲೂ ಹಿಂದೆ

ಮೀಸಲಿಟ್ಟ ಅನುದಾನದಲ್ಲಿ ಈವರೆಗೆ ಶೇ 39ರಷ್ಟು ಹಣವಷ್ಟೇ ವೆಚ್ಚ l ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಬೆಳಕಿಗೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 20:15 IST
Last Updated 16 ಡಿಸೆಂಬರ್ 2019, 20:15 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಮೀಸಲಾದ ಅನುದಾನದಲ್ಲಿ ಈವರೆಗೆ ಶೇ 39ರಷ್ಟು ಖರ್ಚು ಮಾಡಿದ್ದು, ಉಳಿದಿರುವಮೂರೂವರೆ ತಿಂಗಳಲ್ಲಿ ಅಧಿಕಾರಿಗಳು ಶೇ 61ರಷ್ಟು ಹಣ ಖರ್ಚುಮಾಡಬೇಕಿದೆ!

ಪರಿಶಿಷ್ಟ ಜಾತಿ ಹಾಗೂ ವರ್ಗದ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಾದ ಅನುದಾನ ಬಳಕೆ ಕುರಿತು ಸಮಾಜ ಕಲ್ಯಾಣ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಕಾಸಸೌಧದಲ್ಲಿ ಸೋಮವಾರಪ್ರಗತಿ ಪರಿಶೀಲನೆ ನಡೆಸಿದ ಸಮಯದಲ್ಲಿ ಸಮರ್ಪಕವಾಗಿ ಹಣ ವೆಚ್ಚ ಮಾಡದಿರುವುದು ಬೆಳಕಿಗೆ ಬಂದಿದೆ.

ಅನುಷ್ಠಾನ ಹೊಣೆಹೊತ್ತಿರುವ 37 ಇಲಾಖೆಗಳ ಒಟ್ಟಾರೆ ಪ್ರಗತಿ ತೀರಾ ನಿರಾಶಾದಾಯಕವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಶೀಘ್ರವೇ ಕಾರ್ಯಯೋಜನೆ ರೂಪಿಸಿ ತ್ವರಿತಗೊಳಿಸುವಂತೆ ಸಲಹೆ ಮಾಡಿದರು. ಪರಿಶಿಷ್ಟರಿಗೆ ಮೀಸಲಾದ ಹಣವನ್ನು ಅದೇ ಉದ್ದೇಶಕ್ಕೆ ಬಳಸಬೇಕು. ಬಳಕೆ ಆಗದಿದ್ದರೆ ನಿಯಮದಂತೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆಎಂದು ಎಚ್ಚರಿಕೆ ನೀಡಿದರು.

ADVERTISEMENT

13 ಸಾವಿರ ಅರ್ಜಿ ಬಾಕಿ: ಗಂಗಾ ಕಲ್ಯಾಣ ಯೋಜನೆಯಲ್ಲಿ 13 ಸಾವಿರ ಅರ್ಜಿಗಳು ಬಾಕಿ ಉಳಿದಿದ್ದು, ತ್ವರಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಹಣವನ್ನು ಸರ್ಕಾರ ಕೊಡುತ್ತಿದ್ದರೂ ಕೆಲಸ ಮಾಡಲು ಆಗಿರುವ ಸಮಸ್ಯೆ ಏನು ಎಂದು ವಿದ್ಯುತ್ ಕಂಪನಿಗಳ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಸಭೆ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ಪೂರ್ಣ ಪ್ರಮಾಣದಲ್ಲಿ ಅನುದಾನ ಬಳಕೆ ಸಾಧ್ಯವಾಗದಿದ್ದರೆ ಎರಡು ತಿಂಗಳಲ್ಲಿ ಹಣ ವಾಪಸ್ ಮಾಡಿದರೆ ಅಗತ್ಯ ಇರುವ ಇಲಾಖೆಗಳಿಗೆ ನೀಡಿ, ಮರುಹೊಂದಾಣಿಕೆ ಮಾಡಲಾಗುವುದು. ಇತರೆ ಇಲಾಖೆಗಳ ಮೂಲಕ ಪರಿಶಿಷ್ಟರಿಗೆ ಈ ಹಣ ವೆಚ್ಚವಾಗು
ವಂತೆ ನೋಡಿಕೊಳ್ಳಲಾಗುವುದು’ ಎಂದರು.

‘ಇ– ಪ್ರಕ್ಯೂರ್‌ಮೆಂಟ್‌ನಲ್ಲಿ ಸಮಸ್ಯೆ ಉಂಟಾಗಿದ್ದು, ಇದು ಮೂರು ತಿಂಗಳು ಕೆಲಸ ಮಾಡಲಿಲ್ಲ. ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಿ ಒಪ್ಪಿಗೆ ನೀಡುವುದು ತಡವಾಯಿತು. ಇದರಿಂದ ಟೆಂಡರ್ ಕರೆಯುವುದು ಮತ್ತಿತರ ಕೆಲಸಗಳಿಗೆ ಅಡಚಣೆಯಾಯಿತು. ಹಾಗಾಗಿ ಹಣ ವೆಚ್ಚಮಾಡಲು ಸಾಧ್ಯವಾಗಿಲ್ಲ. ಉಳಿದ ಸಮಯದಲ್ಲಿ ಚುರುಕುಗೊಳಿಸುವಂತೆ ಸೂಚಿಸಿದ್ದೇನೆ’ ಎಂದು ಹೇಳಿದರು.

ಹೊಸ ಯೋಜನೆ:ಮುಂದಿನ ವರ್ಷದಿಂದ ವೈಯಕ್ತಿಕವಾಗಿ ಫಲಾನುಭವಿಗಳಿಗೆ ಅನುಕೂಲ ಮಾಡಿ
ಕೊಡುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಮೇಕೆ, ಕುರಿ ಸಾಕಾಣಿಕೆಗೆ ನೆರವು, ಕೃಷಿ ಉಪಕರಣ ವಿತರಣೆ ಮಾಡಲಾಗುವುದು. ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಪರಿಶಿಷ್ಟ ಜಾತಿ ಹಾಗೂವರ್ಗದ ಅರ್ಹರನ್ನು ಸದಸ್ಯರನ್ನಾಗಿ ಮಾಡಲಾಗುವುದು. ಸದಸ್ಯತ್ವ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದರು.

₹30,445 ಕೋಟಿ ಅನುದಾನ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಿಗೆ ₹30,445 ಕೋಟಿ ಒದಗಿಸಲಾಗಿದೆ. ನವೆಂಬರ್ ಅಂತ್ಯಕ್ಕೆ ₹11,861 ಕೋಟಿ ವೆಚ್ಚ ಮಾಡಲಾಗಿದೆ.

ಕಂದಾಯ, ಕೌಶಲ ಅಭಿವೃದ್ಧಿ, ಕೃಷಿ, ಅರಣ್ಯ, ಪಶುಸಂಗೋಪನೆ, ಆರೋಗ್ಯ, ತೋಟಗಾರಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ತೀವ್ರ ಕಳಪೆ ಸಾಧನೆ ಮಾಡಿವೆ. ನಿಗದಿತ ಗುರಿ ತಲುಪುವಂತೆ ಎಚ್ಚರಿಸಲಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.