ADVERTISEMENT

ಬಾದಾಮಿ: ಕಮಿಷನ್‌ ಆಸೆಗೆ ಸಿದ್ದರಾಮಯ್ಯರಿಂದ ಸ್ಥಳೀಯರಿಗೆ ಅನ್ಯಾಯ– ಆರೋಪ

ಬಾದಾಮಿ: ಸಿದ್ದರಾಮಯ್ಯ ಆಪ್ತರ ವಿರುದ್ಧ ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷರ ಆರೋಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 21:25 IST
Last Updated 7 ಫೆಬ್ರುವರಿ 2023, 21:25 IST
   

ಬಾಗಲಕೋಟೆ: ‘ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರ ಆಪ್ತರು ಕಮಿಷನ್‌ ಆಸೆಗಾಗಿ ಟೆಂಡರ್‌ ಅನ್ನು ರಾಜ್ಯಮಟ್ಟದ ಗುತ್ತಿಗೆದಾರರಿಗೆ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ’ ಎಂದು ಬಾದಾಮಿ ತಾಲ್ಲೂಕು ಗುತ್ತಿಗೆದಾರರ ಸಂಘ ಆರೋಪಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಬಿ. ಹೊಸಗೌಡರ ಮತ್ತು ಗುತ್ತಿಗೆದಾರ ಬಾಲಪ್ಪ ನಂದೆಪ್ಪನವರ್, ‘ಸ್ಥಳೀಯ ಪ್ರಥಮದರ್ಜೆ ಗುತ್ತಿಗೆದಾರರು ₹3 ಕೋಟಿ ಮೊತ್ತದವರೆಗಿನ ಟೆಂಡರ್ ಪಡೆಯಬಹುದಾಗಿದೆ. ಆದರೆ, ಸ್ಥಳೀಯರಿಗೆ ತಪ್ಪಿಸಲು ಮೂರು ನಾಲ್ಕು ಕಾಮಗಾರಿಗಳನ್ನು ಸೇರಿಸಿ ಪ್ಯಾಕೇಜ್‌ ಮಾಡಿ ಹೆಚ್ಚಿನ ಮೊತ್ತದ ಒಂದೇ ಟೆಂಡರ್ ಕರೆದು ಹೊರಗಿನವರಿಗೆ ಸಿಗುವಂತೆ ಮಾಡಲಾಗುತ್ತಿದೆ’ ಎಂದು ದೂರಿದರು.

‘ವೈಯಕ್ತಿಕವಾಗಿ ಶೇ 10 ರಿಂದ 15ರಷ್ಟು ಕಮಿಷನ್‌ ನಡೆಯುತ್ತಿದೆ. ಒಟ್ಟಾರೆ ಶೇ 40 ಮೀರುತ್ತದೆ. ಎಲ್ಲವೂ ಸಿದ್ದರಾಮಯ್ಯ ಆಪ್ತ, ಕಾಂಗ್ರೆಸ್‌ ಮುಖಂಡ ಹೊಳೆಬಸು ಶೆಟ್ಟರ್ ಹೇಳಿದಂತೆ ನಡೆಯುತ್ತಿದೆ. ಸ್ಥಳೀಯ ಗುತ್ತಿಗೆ
ದಾರರು ವಾಹನಗಳನ್ನು ಮಾರುವ ಸ್ಥಿತಿ ಬಂದಿದೆ’ ಎಂದು ಹೇಳಿದರು.

ADVERTISEMENT

‘ಈ ಬಗ್ಗೆ ಸಿದ್ದರಾಮಯ್ಯ ಅವರನ್ನು ದೂರುವುದಿಲ್ಲ. ಅವರ ಗಮನಕ್ಕೆ ಬಾರದಂತೆ ಹಿಂಬಾಲಕರು ನಿಭಾಯಿಸುತ್ತಿದ್ದಾರೆ. ಬಾದಾಮಿಗೆ ಬಂದಾಗ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಅವರ ಹಿಂಬಾಲಕರು ಬಿಡುವುದಿಲ್ಲ’ ಎಂದರು.

‘ಟೆಂಡರ್‌ ಕರೆಯುವಾಗ ಪಾರದರ್ಶಕತೆ ಕಾಪಾಡಬೇಕು. ಇಲ್ಲದಿದ್ದರೆ, ಕಾನೂನು ಹೋರಾಟ ಮಾಡುವ ಜತೆಗೆ ಲೋಕಾಯುಕ್ತಕ್ಕೂ ದೂರು ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.