ಹೋಜಾಯ್ (ಅಸ್ಸಾಂ): ಹಿಂದೂಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಎಐಯುಡಿಎಫ್ ಮುಖ್ಯಸ್ಥ ಸಂಸದ ಬದ್ರುದ್ದೀನ್ ಅಜ್ಮಲ್ ಕ್ಷಮೆ ಯಾಚಿಸಿದ್ದಾರೆ. ನಾನು ಆಡಿದ ಮಾತುಗಳಿಂದ ನನಗೆ ನಾಚಿಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
‘ಯಾವುದೇ ಸಮುದಾಯದ ಭಾವನೆಗಳಗೆ ಧಕ್ಕೆ ಉಂಟು ಮಾಡಬೇಕು ಎನ್ನುವುದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ಮಾತುಗಳಿಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ. ಹಿರಿಯ ನಾಯಕನಾಗಿ ನಾನು ಆ ರೀತಿ ಮಾತನಾಡಬಾರದಿತ್ತು. ನನ್ನ ಹೇಳಿಕೆಯಿಂದ ನೋವಾದವರೊಂದಿಗೆ ನಾನು ಕ್ಷಮೆ ಕೋರುತ್ತೇನೆ. ನನ್ನ ಹೇಳಿಕೆಗಳಿಂದ ನನಗೆ ನಾಚಿಕೆಯಾಗುತ್ತಿದೆ. ಅಲ್ಪಸಂಖ್ಯಾತರಿಗೆ ಶಿಕ್ಷಣ, ಉದ್ಯೋಗ ನೀಡಬೇಕು ಎಂದು ಸರ್ಕಾರಕ್ಕೆ ತಿಳಿಸಬೇಕು ಎನ್ನುವುದಷ್ಟೇ ನನ್ನ ಉದ್ದೇಶವಾಗಿತ್ತು‘ ಎಂದು ಅಜ್ಮಲ್ ಹೇಳಿದ್ದಾರೆ.
ಅಲ್ಲದೇ ಜನಸಂಖ್ಯೆ ನಿಯಂತ್ರಣದ ಬಗ್ಗೆ ಯೋಚನೆ ಮಾಡಬೇಕಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಅಜ್ಮಲ್ ಹೇಳಿದ್ದೇನು?
ಶುಕ್ರವಾರ, ಮುಸ್ಲಿಮರ ಜನಸಂಖ್ಯೆ ಹೆಚ್ಚಲು ಕಾರಣ ಏನು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಜ್ಮಲ್, ‘ಮುಸ್ಲಿಂ ಯುವಕರು 20–22 ನೇ ವರ್ಷದಲ್ಲಿ ಹಾಗೂ ಯುವತಿಯರು 18ನೇ ವಯಸ್ಸಿಗೆ ವಿವಾಹವಾಗುತ್ತಾರೆ. ಇನ್ನೊಂದು ಕಡೆ, ಅವರು (ಹಿಂದೂಗಳು) ಮದುವೆಗೂ ಮುಂಚೆ ಒಂದು, ಎರಡು ಅಥವಾ ಮೂವರು ಅನೈತಿಕ ಪತ್ನಿಯರನ್ನು ಇಟ್ಟುಕೊಳ್ಳುತ್ತಾರೆ. ಅವರು ಮಕ್ಕಳನ್ನು ಪಡೆಯವುದಿಲ್ಲ. ಅವರಷ್ಟಕ್ಕೆ ಸಂತೋಷಪಡುತ್ತಾ, ಹಣ ಉಳಿಸುತ್ತಾರೆ‘ ಎಂದಿದ್ದರು.
ಮುಸ್ಲಿಂ ಜನಸಂಖ್ಯೆ ಹೆಚ್ಚಳವಾಗುತ್ತಿದೆಯಲ್ಲಾ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದ ಅವರು, ‘ಹಿಂದೂಗಳ ಪೋಷಕರ ಒತ್ತಡದಿಂದ 40 ವರ್ಷದ ಬಳಿಕ ವಿವಾಹವಾಗುತ್ತಾರೆ. ಹೀಗಾದರೆ 40 ವರ್ಷಗಳ ಬಳಿಕ ಮಕ್ಕಳಾಗಬೇಕು ಎಂದರೆ ಹೇಗೆ? ಫಲವತ್ತಾದ ಭೂಮಿ ಉಳುಮೆ ಮಾಡಿದರೆ ಮಾತ್ರ ಉತ್ತಮ ಫಲ ತೆಗೆಯಲು ಸಾಧ್ಯ‘ ಎಂದಿದ್ದರು.
ಇದೇ ವೇಳೆ ಬೇಗನೇ ವಿವಾಹವಾಗಿ, ಮಕ್ಕಳ ಪಡೆಯುವ ‘ಮುಸ್ಲಿಂ ಫಾರ್ಮುಲಾ‘ವನ್ನು ಹಿಂದೂಗಳು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದರು.
‘ಅವರ ಯುವಕರು 20–22ನೇ ವರ್ಷದಲ್ಲಿ, ಯುವತಿಯರು 18–20ನೇ ವಯಸ್ಸಿನಲ್ಲಿ ವಿವಾಹವಾಗಲಿ. ಬಳಿಕ ಫಲಿತಾಂಶ ನೋಡಲಿ‘ ಎಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.