ADVERTISEMENT

ಬಗರ್‌ ಹುಕುಂ: 4.83 ಲಕ್ಷ ಅರ್ಜಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 21:54 IST
Last Updated 7 ಜೂನ್ 2021, 21:54 IST
 ಬಗರ್‌ಹುಕುಂ ಸಾಗುವಳಿಯ ಭೂಮಿ
ಬಗರ್‌ಹುಕುಂ ಸಾಗುವಳಿಯ ಭೂಮಿ    

ಬೆಂಗಳೂರು: ಬಗರ್‌ಹುಕುಂ ಸಾಗುವಳಿಯ ಭೂಮಿ ಸಕ್ರಮಗೊಳಿಸುವ ತಂತ್ರಾಂಶಕ್ಕೆ ಅಪ್‌ಲೋಡ್‌ ಆಗದೇ ಇರುವ 4.83 ಲಕ್ಷ ಅರ್ಜಿಗಳನ್ನು ಜುಲೈ 31 ರೊಳಗೆ ಅಪ್‌ಲೋಡ್‌ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ ಅವರು ಹೇಳಿದ್ದಾರೆ.

ಇದರಿಂದ ಅರ್ಜಿ ಸಲ್ಲಿಸಿರುವ ಅರ್ಹ ರೈತರ ಜಮೀನು ಸಕ್ರಮಕ್ಕೆ ಅನುಕೂಲವಾಗಲಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರಿ ಜಮೀನಿನಲ್ಲಿ 2005 ಜನವರಿ 1 ಕ್ಕೂ ಮೊದಲು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಭೂರಹಿತರು, ಸಣ್ಣ ರೈತರ ಜಮೀನುಗಳನ್ನು ಸಕ್ರಮಗೊಳಿಸಲು ಅರ್ಜಿಗಳನ್ನು ಅಪ್‌ಲೋಡ್‌ ಮಾಡಲು ಮತ್ತೆ ಅವಕಾಶ ನೀಡಲಾಗಿದೆ ಎಂದು ಅಶೋಕ ಹೇಳಿದರು.

ADVERTISEMENT

ಮನೆಗಳ ಸಕ್ರಮ ಅವಧಿ ವಿಸ್ತರಣೆ

ಗ್ರಾಮಾಂತರ ಮತ್ತು ನಗರ ಪ್ರದೇಶಗಳ ಸರ್ಕಾರಿ ಜಮೀನುಗಳಲ್ಲಿ 2015 ರ ಜನವರಿ 1 ಕ್ಕೆ ಮೊದಲು ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು 2022 ರ ಮಾರ್ಚ್‌ 31 ರವರೆಗೆ ವಿಸ್ತರಿಸಲಾಗಿದೆ.

ಸಕ್ರಮಕ್ಕಾಗಿ ಭೂಕಂದಾಯ ಕಾಯ್ದೆಯ 94 ಸಿ ಮತ್ತು 94 ಸಿಸಿ ಅಡಿ ಅವಕಾಶ ಕಲ್ಪಿಸಲಾಗಿತ್ತು. ಈ ಹಿಂದೆ ನೀಡಿದ್ದ ಕಾಲಾವಕಾಶ ಮುಗಿದಿದ್ದರೂ ಕಂದಾಯ ನಿಯಮ 108 ಕ್ಯೂ ಮತ್ತು 108 ಎಕ್ಸ್‌ಗೆ ತಿದ್ದುಪಡಿ ಮಾಡುವ ಮೂಲಕ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ 2023 ರ ಮಾರ್ಚ್‌ 31 ರೊಳಗೆ ಹಕ್ಕು ಪತ್ರ ನೀಡಲಾಗುವುದು ಎಂದು ಅಶೋಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.