ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತರ ಹರ್ಷನ ಕೊಲೆ ಪ್ರಕರಣವನ್ನು ಇನ್ನೊಂದು ವಾರದೊಳಗೆ ಎನ್ಐಎ ತನಿಖಾ ತಂಡಕ್ಕೆ ಒಪ್ಪಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರದ್ಲಾಂಜೆ ಹೇಳಿದರು.
ಶಿವಮೊಗ್ಗದ ಹರ್ಷನ ಮನೆಗೆ ಶನಿವಾರ ಭೇಟಿ ನೀಡಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾವು ಕೇವಲ ಕುಟುಂಬಕ್ಕೆ ದುಃಖ ತಂದಿಲ್ಲ; ಬದಲಿಗೆ ಇಡೀ ದೇಶಕ್ಕೆ ನೋವು ತಂದಿದೆ. ಹರ್ಷನ ಸಾವಿನ ಹಿಂದೆ ಅಂತರರಾಷ್ಟ್ರೀಯ ಷಡ್ಯಂತ್ರ ಅಡಗಿದೆ ಎಂಬ ಶಂಕೆ ಇದೆ. ಕೇಂದ್ರ ಸರ್ಕಾರ ಈ ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಹೇಳಿದೆ. ಹಾಗಾಗಿ ಒಂದು ವಾರದೊಳಗೆ ಎನ್ಐಎಗೆ ಈ ಪ್ರಕರಣ ಹಸ್ತಾಂತರಗೊಳ್ಳುವ ನಿರೀಕ್ಷೆ ಇದೆ’ ಎಂದರು.
‘ಹರ್ಷನ ಕೊಲೆ ಮಾಡಿರುವುದನ್ನು ನೋಡಿದರೆ ತಾಲಿಬಾನ್ ಸಂಸ್ಕೃತಿ ಎದ್ದುತೋರುತ್ತದೆ. ಕೊಲೆ ಮಾಡಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ ಎಂದರೆ ಅವರ ಮಾನಸಿಕತೆ ಎಷ್ಟಿದೆ ಎಂದು ತಿಳಿದುಬರುತ್ತದೆ. ಇದು ಒಂದು ಮನೆಯ ಸಮಸ್ಯೆಯಲ್ಲ. ಈ ಸಮಸ್ಯೆ ಇಡೀ ಹಿಂದೂ ಸಮಾಜದ ಸಮಸ್ಯೆ ಆಗಿದೆ. ಸುಮಾರು 30 ಹಿಂದೂ ಕಾರ್ಯಕರ್ತರನ್ನು ಸಮಾಜ ಕಳೆದುಕೊಂಡಿದೆ. ಇವರ ಅಟ್ಟಹಾಸವನ್ನು ತಡೆಯಬೇಕಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.