ADVERTISEMENT

ಬಾಲಾಂಜನೇಯ ಮಂಗಳೂರು, ವೀರಮಾರುತಿ ಸಾಲಿಗ್ರಾಮ ಚಾಂಪಿಯನ್‌

ಬೆಂಚ್‌ ಪ್ರೆಸ್‌ ಸ್ಪರ್ಧೆ: ದ್ವಿತೀಯ ಸ್ಥಾನಗಳಿಗೆ ತೃಪ್ತಿ ಪಟ್ಟ ದಾವಣಗೆರೆ, ಶಿವಮೊಗ್ಗ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 6:29 IST
Last Updated 12 ಏಪ್ರಿಲ್ 2021, 6:29 IST
ದಾವಣಗೆರೆ ಗ್ರೂಪ್‌ ಆಫ್‌ ಐರನ್‌ ಗೇಮ್ಸ್‌ ವತಿಯಿಂದ ಕರ್ನಾಟಕ ಪವರ್‌ ಲಿಫ್ಟಿಂಗ್‌ ಅಸೋಸಿಯೇಶನ್‌ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಬೆಂಚ್‌ ಪ್ರೆಸ್‌ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಮಂಗಳೂರಿನ ಬಾಲಾಂಜನೇಯ ವ್ಯಾಯಾಮ ಶಾಲೆ ಚಾಂಪಿಯನ್‌ ಆಗಿದೆ.
ದಾವಣಗೆರೆ ಗ್ರೂಪ್‌ ಆಫ್‌ ಐರನ್‌ ಗೇಮ್ಸ್‌ ವತಿಯಿಂದ ಕರ್ನಾಟಕ ಪವರ್‌ ಲಿಫ್ಟಿಂಗ್‌ ಅಸೋಸಿಯೇಶನ್‌ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಬೆಂಚ್‌ ಪ್ರೆಸ್‌ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಮಂಗಳೂರಿನ ಬಾಲಾಂಜನೇಯ ವ್ಯಾಯಾಮ ಶಾಲೆ ಚಾಂಪಿಯನ್‌ ಆಗಿದೆ.   

ದಾವಣಗೆರೆ: ಗ್ರೂಪ್‌ ಆಫ್‌ ಐರನ್‌ ಗೇಮ್ಸ್‌ ವತಿಯಿಂದ ಕರ್ನಾಟಕ ಪವರ್‌ ಲಿಫ್ಟಿಂಗ್‌ ಅಸೋಸಿಯೇಶನ್‌ ಸಹಯೋಗದಲ್ಲಿ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಮತ್ತು ಭಾನುವಾರ ನಡೆದ ರಾಜ್ಯಮಟ್ಟದ ಬೆಂಚ್‌ ಪ್ರೆಸ್‌ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಮಂಗಳೂರಿನ ಬಾಲಾಂಜನೇಯ ವ್ಯಾಯಾಮ ಶಾಲೆ ಚಾಂಪಿಯನ್‌ ಆಗಿದೆ. ಮಹಿಳೆಯರ ವಿಭಾಗದಲ್ಲಿ ಸಾಲಿಗ್ರಾಮ ವೀರಮಾರುತಿ ವ್ಯಾಯಾಮ ಶಾಲೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಪುರುಷರ ವಿಭಾಗದಲ್ಲಿ ದಾವಣಗೆರೆ ಬೀರೇಶ್ವರ ವ್ಯಾಯಾಮ ಶಾಲೆ, ಮಹಿಳೆಯರ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲಾ ತಂಡ ದ್ವಿತೀಯ ಸ್ಥಾನಗಳನ್ನು ಪಡೆದಿವೆ.

ಉತ್ತಮ ಲಿಫ್ಟರ್‌ಗಳು:

ADVERTISEMENT

ಸಬ್‌ಜೂನಿಯರ್‌ ವಿಭಾಗ: ಪುರುಷರಲ್ಲಿ ಹೊಸಪೇಟೆ ವಿಕ್ಟರಿ ಜಿಮ್‌ನ ಗೌಸ್‌ ಪೀರ್‌, ಮಹಿಳೆಯರಲ್ಲಿ ಮಂಗಳೂರು ಬೋಳಾರ್‌ ವೀರಮಾರುತಿ ವ್ಯಾಯಾಮ ಶಾಲೆಯ ರೆಶಿಯಲ್‌ ಆರ್‌.ಎಂ.

ಜೂನಿಯರ್‌ ವಿಭಾಗ: ಪುರುಷರಲ್ಲಿ ದಾವಣಗೆರೆ ಬೀರಲಿಂಗೇಶ್ವರದ ಸುನಿಲ್‌ ಬಿ., ಮಹಿಳೆಯರಲ್ಲಿ ಮಂಗಳೂರು ಕಾರ್ಲೊಸ್‌ನ ವೆನಿಸಿಯಾ ಎ ಕಾರ್ಲೊ.

ಸೀನಿಯರ್‌ ವಿಭಾಗ: ಪುರುಷರಲ್ಲಿ ಮಂಗಳೂರು ಬಾಲಾಂಜನೇಯದ ಅನೂಪ್‌ ಕುಮಾರ್‌, ಮಹಿಳೆಯರಲ್ಲಿ ಮಂಗಳೂರು ಐರನ್‌ ಡೆನ್‌ನ ಶ್ರದ್ಧಾ ಎಸ್‌. ನಾಯಕ್‌.

ಮಾಸ್ಟರ್‌ ವಿಭಾಗ: ಪುರುಷರ ವಿಭಾಗದಲ್ಲಿ ಮಂಗಳೂರು ಬಾಲಾಂಜನೇಯದ ವಿನ್ಸೆಂಟ್‌ ಪ್ರಕಾಶ್‌ ಕಾರ್ಲೊ. ಮಹಿಳೆಯರ ವಿಭಾಗದಲ್ಲಿ ಬೆಂಗಳೂರು ರೆಗ್‌ ಕೇಜ್‌ ಫಿಟ್‌ನೆಸ್‌ನ ಅಲಿಫಿಯಾ ವಾಗ್‌.

ಬಹುಮಾನ ವಿತರಣೆ: ಶಾಸಕ ಶಾಮನೂರು ಶಿವಶಂಕರಪ್ಪ, ಗ್ರೂಪ್‌ ಆಫ್‌ ಐರನ್‌ ಗೇಮ್ಸ್‌ ಅಧ್ಯಕ್ಷ ಎಚ್‌. ದಾದಾಪೀರ್‌, ಡಿವೈಎಸ್‌ಪಿ ನಾಗೇಶ್‌ ಐತಾಳ್‌, ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ, ಕೆಪಿಎಲ್‌ಎ ಕಾರ್ಯದರ್ಶಿ ಸತೀಶ್‌ ಕುಮಾರ್‌ ಕುದ್ರೋಳಿ ವಿಜೇತರಿಗೆ ಬಹುಮಾನ ವಿತರಿಸಿದರು. ಆಜಾದ್‌ನಗರ ಪಿಎಸ್‌ಐ ಕೆ.ಎನ್‌. ಶೈಲಜಾ, ತಮಿಳುನಾಡು ಪವರ್‌ ಲಿಫ್ಟಿಂಗ್‌ನ ಎಸ್‌. ನಾಗರಾಜನ್‌, ಜಿಲ್ಲಾ ಪವರ್‌ಲಿಫ್ಟಿಂಗ್‌ ಅಸೋಸಿಯೇಶನ್‌ ಕಾರ್ಯದರ್ಶಿ ಕೆ. ಗಂಗಪ್ಪ, ಗ್ರೂಪ್‌ ಆಫ್‌ ಐರನ್‌ ಗೇಮ್ಸ್‌ ಕೋಶಾಧಿಕಾರಿ ಷಣ್ಮುಖ ಎಂ.ಎಚ್‌., ಬಿ. ದಾದಾಪೀರ್‌, ಎಚ್‌. ಬಸವರಾಜ್‌, ಕೆ.ಪಿ. ಕಾರಂತ, ಬಿ.ಎಚ್‌. ಭಾರತಿ, ವಿ. ಲೋಗನಾಥನ್‌, ಮಹೇಶ್ವರ್‌, ರಜ್ವಿಖಾನ್‌ ಅವರೂ ಇದ್ದರು.

ದಾವಣಗೆರೆಯಲ್ಲಿ ಸುಳ್ಳುಗಾರರೇ ಹೆಚ್ಚು: ಶಾಮನೂರು

ಒಂದು ಸುಳ್ಳನ್ನು ಪದೇ ಪದೇ ಹೇಳಿ ಸತ್ಯ ಎಂದು ಬಿಂಬಿಸುವವರು ಎಲ್ಲ ಕಡೆ ಇದ್ದಾರೆ. ದಾವಣಗೆರೆಯಲ್ಲಿ ಅಂಥವರ ಸಂಖ್ಯೆಯೇ ಹೆಚ್ಚಿದೆ. ಸ್ಮಾರ್ಟ್‌ಸಿಟಿ ಯೋಜನೆ ಇರಬಹುದು, ಕಾಲುವೆ, ರಸ್ತೆ, ನೀರಿನ ಯೋಜನೆಗಳಿರಬಹುದು, ಗ್ಲಾಸ್‌ಹೌಸ್‌ ಇರಬಹುದು ಕೆಲವರು ತಾವು ಮಾಡಿದ್ದು ಎಂದು ನಿತ್ಯ ಸುಳ್ಳು ಹೇಳುತ್ತಾ ತಿರುಗಾಡುತ್ತಿದ್ದಾರೆ ಎಂದು ಸಂಸದರನ್ನು ಶಾಸಕ ಶಾಮನೂರು ಶಿವಶಂಕರಪ್ಪ ಪರೋಕ್ಷವಾಗಿ ಟೀಕಿಸಿದರು.

ಕೊರೊನಾ ಹೆಚ್ಚಾಗಿದೆ. ಕೊರೊನಾ ಹೆಸರಲ್ಲಿ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ದಾವಣಗೆರೆ ಎನ್ನುವುದು ದುಡ್ಡು ಮಾಡುವ ಜಾಗ ಎಂಬಂತಾಗಿದೆ. ಅದಕ್ಕಾಗಿ ಅಧಿಕಾರಿಗಳು ಇಲ್ಲಿಗೆ ಬರಲು ಈಗ ಹಾತೊರೆಯುತ್ತಿದ್ದಾರೆ ಎಂದು ತಿಳಿಸಿದರು.

ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ಎಲ್ಲರು ನಂಬಿದ್ದರು. ಆದರೆ ಜಾಸ್ತಿಯಾಗಿದೆ. ಬೇಕಿದ್ದರೆ ಕರ್ನಾಟಕದ ಚುನಾವಣೆ, ಈಗ ನಡೆಯುತ್ತಿರುವ ಪಶ್ಚಿಮ ಬಂಗಾಳದ ಚುನಾವಣೆ ನೋಡಿ ಎಂದು ಹೇಳಿದರು.

‘ಇಂಥ ಕ್ರೀಡಾಸ್ಪರ್ಧೆಗಳನ್ನು ನಡೆಸಲು ಸರ್ಕಾರದಿಂದ ಅನುದಾನ ಕೇಳಿ ಕೇಳಿ ಸಾಕಾಗಿದೆ. ₹ 70–80 ಲಕ್ಷ ನನಗೆ ಶಾಸಕ ನಿಧಿ ಬರುತ್ತದೆ. ಅದರಲ್ಲಿಯೇ ಸಹಾಯ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.